ಶಿವಮೊಗ್ಗ: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸೋಮವಾಋ ಮರು ದಾಖಲಿಸಲಾಗಿದೆ.
ಈ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಆದೇಶವನ್ನು ಫೆ. 4ಕ್ಕೆ ಕಾಯ್ದಿರಿಸಿದೆ.
ಹಿನ್ನೆಲೆ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡು, ತಮ್ಮ ಆದಾಯಕ್ಕೂ
ಮೀರಿ ಸಂಪಾದನೆ ಮಾಡಿದ್ದಾರೆ ಎಂದು 2012ರ ಡಿ. 13ರಂದು ವಕೀಲ ಬಿ.ವಿನೋದ್ ಶಿವಮೊಗ್ಗ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಲೋಕಾಯುಕ್ತ ನ್ಯಾಯಾಲಯವು ಈ ದೂರಿನ ಆಧಾರದಲ್ಲಿ ತನಿಖೆಗೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
2012ರ ಡಿ. 25ರಂದು ಕೆ.ಎಸ್.ಈಶ್ವರಪ್ಪ ಅವರ ನಿವಾಸ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ನಂತರ ಈಶ್ವರಪ್ಪ ಈ ದೂರಿನ ವಿರುದ್ಧ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು.
ಈಶ್ವರಪ್ಪ ಉಪ ಮುಖ್ಯಮಂತ್ರಿ ಆಗಿರುವುದರಿಂದ ದೂರುದಾರ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ. ದೂರಿಗೆ ಪೂರ್ವಾನುಮತಿ ಅಗತ್ಯ ಎಂದು ಹೈಕೋರ್ಟ್ ಹೇಳಿತ್ತು.
ದೂರುದಾರ ದೂರನ್ನು ಹಿಂದಕ್ಕೆ ಪಡೆದು, ಪೂರ್ವಾನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಪ್ರಸ್ತುತ ಕೆ.ಎಸ್.ಈಶ್ವರಪ್ಪ ಅವರು ಸಾರ್ವಜನಿಕ ಸೇವೆಯಲ್ಲಿ ಇಲ್ಲದ ಕಾರಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ಪೂರ್ವಾನುಮತಿ
ಅಗತ್ಯ ಇಲ್ಲ ಎಂದು ರಾಜ್ಯಪಾಲರ ಕಚೇರಿಯಿಂದ ಪತ್ರ ಬಂದಿದ್ದು ದೂರುದಾರ ವಿನೋದ್ ದೂರನ್ನು ಮರು ದಾಖಲಿಸಿದ್ದಾರೆ.