ಬೆಳಗಾವಿ: `ಬೆಳಗಾವಿಯಲ್ಲಿ ನಿರ್ಮಾಣವಾಗಿರುವ `ಸುವರ್ಣ ಸೌಧ~ವು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ಬುಧವಾರ ರಾತ್ರಿ `ಸುವರ್ಣ ಸೌಧ~ಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಉತ್ತರ ಕರ್ನಾಟಕದ ಜನರ ಬಹಳ ವರ್ಷಗಳ ಕನಸು ಇದೀಗ ನನಸಾಗುತ್ತಿದೆ. ಪ್ರತಿ ವರ್ಷವೂ ಇಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುವುದು. ಸಚಿವ ಸಂಪುಟ ಸಭೆ, ಸಚಿವ ಸಂಪುಟದ ಉಪ ಸಮಿತಿ ಸಭೆಯನ್ನು ಇಲ್ಲೇ ನಡೆಸಲಾಗುವುದು. ಸುವರ್ಣ ಸೌಧದಲ್ಲಿ ಸದಾ ಚಟುವಟಿಕೆ ನಡೆಯುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಲವು ಸರ್ಕಾರಿ ಕಚೇರಿಗಳ ವರ್ಗಾವಣೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು~ ಎಂದರು.
`ಸುವರ್ಣ ಸೌಧದ ಉದ್ಘಾಟನಾ ಸಮಾರಂಭವನ್ನು ಯಾವುದೇ ಪಕ್ಷದ ನಾಯಕರೂ ಬಹಿಷ್ಕರಿಸುತ್ತಿಲ್ಲ. ಎಲ್ಲರೂ ಸೇರಿಕೊಂಡು ಸುವರ್ಣ ಸೌಧವನ್ನು ನಾಡಿಗೆ ಸಮರ್ಪಣೆ ಮಾಡುತ್ತಿದ್ದೇವೆ~ ಎಂದು ಶೆಟ್ಟರ್ ತಿಳಿಸಿದರು.
ವಾರ್ತಾ ಇಲಾಖೆ ವತಿಯಿಂದ ವಿಧಾನ ಸೌಧ ಹಾಗೂ ಸುವರ್ಣ ಸೌಧದ ನಿರ್ಮಾಣ ಹಂತದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. `ಸುವರ್ಣ ಸೌಧ~ಕ್ಕೆ ಮಾಡಿದ್ದ ದೀಪಾಲಂಕಾರವನ್ನು ವೀಕ್ಷಿಸಿದರು. ಬಳಿಕ ಉದ್ಘಾಟನಾ ಸಮಾರಂಭ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವೇದಿಕೆ ಸಿದ್ಧಗೊಳಿಸಿರುವುದನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲೋಕೋಪಕೋಗಿ ಸಚಿವ ಸಿ.ಎಂ. ಉದಾಸಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ ನಿರಾಣಿ, ಶಾಸಕರಾದ ವಿ. ಸೋಮಣ್ಣ, ಅಭಯ ಪಾಟೀಲ, ಸಂಜಯ ಪಾಟೀಲ, ಸಂಸದ ಸುರೇಶ ಅಂಗಡಿ ಮತ್ತಿತರರು ಹಾಜರಿದ್ದರು.