ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವನ ಐದು ಕ್ಷೇತ್ರಗಳೆನಿಸಿರುವ ಮುರುಡೇಶ್ವರ (ಭಟ್ಕಳ), ಗುಣವಂತೇಶ್ವರ, ಧಾರೇಶ್ವರ (ಹೊನ್ನಾವರ) ಗೋಕರ್ಣದ ಮಹಾಬಲೇಶ್ವರ (ಕುಮಟಾ) ಹಾಗೂ ಶಜ್ಜೇಶ್ವರ (ಕಾರವಾರ)ದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಬುಧವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಗೋಕರ್ಣಕ್ಕೆ ಆಗಮಿಸಿದ್ದ ಭಕ್ತರು ಆತ್ಮಲಿಂಗಕ್ಕೆ ಬಿಲ್ವಪತ್ರೆ, ಹೂವು ಅರ್ಪಿಸಿ, ಕ್ಷೀರಾಭಿಷೇಕ ಮಾಡಿ ಹರಕೆ ಸಲ್ಲಿಸಿದರು. ಹೃಷಿಕೇಶದಿಂದ ಗಂಗಾಜಲ ತಂದು ಮಹಾಬಲೇಶ್ವರನ ಅಭಿಷೇಕ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.
ಮಹಾಬಲೇಶ್ವರನ ದರ್ಶನಕ್ಕೆ ನಿಂತ ಭಕ್ತರ ಸಾಲು ದೇವಸ್ಥಾನದಿಂದ ಸುಮಾರು ಒಂದು ಕಿಲೋ ಮೀಟರ್ ವರೆಗೂ ಹಬ್ಬಿತ್ತು. ಭಕ್ತರು ಕಡಲಕಿನಾರೆಯಲ್ಲಿ ಉಸುಕಿನಿಂದ ಲಿಂಗವನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು. ಮಹಾಬಲೇಶ್ವರನ ದರ್ಶನಕ್ಕೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಗೋಕರ್ಣಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ, ಕಾರವಾರ, ಅಂಕೋಲಾ, ಕುಮಟಾದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಮುರುಡೇಶ್ವರ, ಧಾರೇಶ್ವರ, ಶಜ್ಜೇಶ್ವರ ಹಾಗೂ ಗುಣವಂತೇಶ್ವರ ಕ್ಷೇತ್ರಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.