ಮಲೇಬೆನ್ನೂರು: ಪ್ರಸಕ್ತ ಸಾಲಿನ ಉಕ್ಕಡಗಾತ್ರಿ ಕರಿಬಸವೇಶ್ವರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪೂಜಾ ವಿಧಿಗಳು ಫೆ. 21ರಂದು ನಂದಿಧ್ವಜ ಪೂಜೆಯೊಂದಿಗೆ ಆರಂಭವಾಗಲಿವೆ.
22ರಂದು ಕರಿಬಸವೇಶ್ವರ ಮಹಾರಥೋತ್ಸವ, 23ರಂದು ತುಲಾಭಾರ, 24 ಮತ್ತು 25ಕ್ಕೆ ಕುಸ್ತಿಪಂದ್ಯ, 26ರಂದು ಫಳಾರ ಹಾಕಿಸುವ ಕಾರ್ಯಕ್ರಮ ನಡೆಯಲಿವೆ. 27ರಂದು ಸಂಜೆ ಪಾಲಿಕೋತ್ಸವ ಹಾಗೂ 28ರಂದು ಫಳಾರ ಒಡೆದು ಹಂಚುವ ವಿಧಿಯೊಂದಿಗೆ ಒಂದು ವಾರದ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಆರಾಧನೆಗೆ ಚಾಲನೆ
ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 59ನೇ ಆರಾಧನಾ ಮಹೋತ್ಸವ ಶುಕ್ರವಾರ ಗಣಪತಿ ಪೂಜೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು.
ಆಶ್ರಮದ ಯಾಗಶಾಲೆಯಲ್ಲಿ ಗಣಪತಿ ಹೋಮ, ಸತ್ಯಗಣಪತಿ ವ್ರತ ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆ ಭಕ್ತರು ಉಪಸ್ಥಿತರಿದ್ದರು.
ಪ್ರತಿ ನಿತ್ಯ ಒಂದು ವಾರಕಾಲ ಗುರುಚರಿತ್ರೆ, ಸಪ್ತಸತಿ, ಭಗವದ್ಗೀತೆ, ಸುಂದರಕಾಂಡ, ಗುರುಕಥಾಮೃತ ಪಾರಾಯಣ, ಗುರುಭಜನೆ ದತ್ತಪಾದುಕೆಗಳಿಗೆ ವಿಶೇಷ ಪೂಜಾವಿಧಿ ಫೆ. 23ರಂದು `ಗುರುಭಿಕ್ಷೆ~ ಹಾಗೂ 24ಕ್ಕೆ `ಆರಾಧನೆ~ ಕಾರ್ಯಕ್ರಮ ಜರುಗಲಿದೆ.
ಪ್ರತಿದಿನ ಸಂಜೆ ಖ್ಯಾತ ಸಾಹಿತಿ ಅ.ರಾ. ಸೇತೂರಾಮರಾವ್ ಅವರಿಂದ ರಾಮಾಯಣ, ಮಹಾಭಾರತ ಹಾಗೂ ವಿದ್ವಾಂಸರಿಂದ ಗುರುಚರಿತ್ರೆ ಪಠಣ, ಸತ್ಸಂಗ, ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.