ಶಿವಮೊಗ್ಗ: ದಿನಕ್ಕೆ ಎಷ್ಟು ಸಮಯ ಓದಬೇಕು? ಪರೀಕ್ಷಾ ಸಮಯದಲ್ಲಿ ಭಯದಿಂದಾಗಿ ಓದಿದ್ದೆಲ್ಲಾ ಮರೆತು ಹೋಗದಂತೆ ಏನು ಮಾಡಬೇಕು? ಯಾವ ಪ್ರಶ್ನೆಗೆ ಎಷ್ಟು ಸಮಯ ಮೀಸಲಿಡಬೇಕು? ಸರಳವಾಗಿ ಉತ್ತರ ಬರೆಯುವುದು ಹೇಗೆ...?
ಎಂಬಿತ್ಯಾದಿ ಪ್ರಶ್ನೆಗಳು ಮೂಡಿಬಂದದ್ದು ಭಾನುವಾರ ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ `ಸ್ಪಂದನ ಬೆಳಕಟ್ಟೆ ಸಂಸ್ಥೆ~ ವತಿಯಿಂದ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸ್ಫೂರ್ತಿ `ಭರವಸೆಯ ಬೆಳಕು~ ಉಚಿತ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ.
ಕೆಲ ವಿದ್ಯಾರ್ಥಿಗಳು ಗಣಿತ, ಇಂಗ್ಲಿಷ್ನಲ್ಲಿ ತೀರಾ ಹಿಂದುಳಿದಿದ್ದು, ಅವರಿಗೆ ತೇರ್ಗಡೆಯಾಗಲು ಕನಿಷ್ಠ ಅಂಕಗಳಿಸಲು ಮಾರ್ಗದರ್ಶನ ನೀಡುವುದು. ಎಷ್ಟೇ ಓದಿದರೂ ಪರೀಕ್ಷಾ ಸಮಯದಲ್ಲಿ ಭಯದಿಂದ ಓದಿದ್ದು ನೆನಪಿಗೆ ಬರುವುದಿಲ್ಲ.
ಹಾಗಾಗದಂತೆ ಏನು ಮಾಡಬೇಕು ಹಾಗೂ ಕೆಲ ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸಲು ಸಮಯವೇ ಆಗುವುದಿಲ್ಲ. ಆ ಸಮಯದಲ್ಲಿ ಯಾವ ಪ್ರಶ್ನೆಗೆ ಎಷ್ಟು ಸಮಯ ಮೀಸಲಿಟ್ಟರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ನೀಡಲಾಗುವುದು ಎಂದು ಸ್ಪಂದನ ಬೆಳಕಟ್ಟೆ ಸಂಸ್ಥೆ ಗೌರವಾಧ್ಯಕ್ಷ ಚಂದ್ರಶೇಖರ್ ಹಿರೇಗೊಣಗೆರೆ ತಿಳಿಸಿದರು.
ಕಾರ್ಯಾಗಾರ 3 ಭಾನುವಾರ ನಡೆಯಲಿದ್ದು, ಪ್ರತಿ ವಾರ ಎರಡೆರಡು ವಿಷಯಗಳ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲೆಯ ಹತ್ತು ಶಾಲೆಗಳ ಸುಮಾರು 85 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಉಚಿತ ಊಟದ ವ್ಯವಸ್ಥೆ ಸಹ ಮಾಡಲಾಗಿದೆ. ಪ್ರಮುಖವಾಗಿ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಉಪನ್ಯಾಸ ಹಾಗೂ ಸಂವಾದ ನಡೆಸಲಾಗುತ್ತದೆ ಎನ್ನುತ್ತಾರೆ ಸರ್ಕಾರಿ ಪ್ರೌಢಶಾಲೆ ಹಿಂದಿ ಶಿಕ್ಷಕಿ ವಿಜಯಲಕ್ಷ್ಮೀ.