ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ಜಿಎಸ್ಎಲ್ವಿ - ಎಂ.ಕೆ.2 ರಾಕೆಟ್ನ ಪರೀಕ್ಷಾರ್ಥ ಉಡಾವಣೆ ಈ ವರ್ಷ ನಡೆಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಹೇಳಿದರು.
ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಇತ್ತೀಚೆಗೆ ನಡೆದ `ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಭೂದೈಶಿಕ ಪರಿಹಾರಗಳು~ ಕುರಿತ ಸಮ್ಮೇಳನದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
`ಈ ರಾಕೆಟ್ನ ಕ್ರಯೋಜನಿಕ್ ಹಂತವನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಲಾಗಿದೆ. ಜೂನ್ ವೇಳೆಗೆ ಎಲ್ಲ ಪರೀಕ್ಷಾ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಈ ವರ್ಷಾಂತ್ಯದೊಳಗೆ ರಾಕೆಟ್ನ ಮೊದಲ ಪರಿಕ್ಷಾರ್ಥ ಪ್ರಯೋಗ ನಡೆಯಲಿದೆ~ ಎಂದು ತಿಳಿಸಿದರು. ಸುಧಾರಿತ ಜಿಎಸ್ಎಲ್ವಿ ಎಂ.ಕೆ.3 ರಾಕೆಟ್ನ ಪರೀಕ್ಷಾರ್ಥ ಪ್ರಯೋಗವನ್ನೂ ಈ ವರ್ಷವೇ ಕೈಗೊಳ್ಳಲಾಗುವುದು ಎಂದರು.
ಸ್ವದೇಶಿ ನಿರ್ಮಿತ ದೂರಸಂವೇದಿ ಉಪಗ್ರಹ ಆರ್ಐಸ್ಯಾಟ್-1ಅನ್ನೂ ಇದೇ ವರ್ಷ ಉಡಾಯಿಸಲಾಗುವುದು. ಪ್ರತಿಕೂಲ ಹವಾಮಾನ ಇದ್ದರೂ ಭೂಮಿಯ ಸ್ಪಷ್ಟ ಚಿತ್ರ ತೆಗೆಯುವ ಸಾಮರ್ಥ್ಯ ಈ ಉಪಗ್ರಹಕ್ಕೆ ಇದೆ ಎಂದು ಅವರು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.
ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲು ಹೈದರಾಬಾದ್ನಲ್ಲಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.