ಉಡುಪಿ: ಕಾರ್ಮಿಕರು ಮತ್ತು ಜನ ಸಾಮಾನ್ಯರ ಪ್ರಮುಖ 10 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದ ಪ್ರಮುಖ 11 ಕಾರ್ಮಿಕ ಸಂಘಟನೆಗಳು ದೆಹಲಿಯಲ್ಲಿ ಗುರುವಾರ ನಡೆಸಿದ ದೆಹಲಿ ಚಲೋ ಹೋರಾಟವನ್ನು ಬೆಂಬಲಿಸಿ ಉಡುಪಿ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ಏರ್ಪಡಿಸಿತ್ತು.
ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಸಾರ್ವಜನಿಕ ರಂಗ ಉದ್ದಿಮೆಗಳನ್ನು ಸರ್ಕಾರ ಖಾಸಗೀ ಕರಣ ಮಾಡಲು ಹೊರಟಿದೆ. ಸರ್ಕಾರದ ಈ ಕ್ರಮ ಸರಿಯಲ್ಲ. ಯಾವುದೇ ಸರ್ಕಾರ ಇರಲಿ ಕಾರ್ಮಿಕರ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿದರೆ ಮಾತ್ರ ಗುಣಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.
ವಿಮಾ ನೌಕರರ ಸಂಘದ ಯು. ಗುರುದತ್ ಮಾತನಾಡಿ, ಸಾರ್ವಜನಿಕ ರಂಗ ಉದ್ದಿಮೆಗಳನ್ನು ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಜೀವ ವಿಮೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳದ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇದರಿಂದ ದೇಶದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹತ್ತು ವರ್ಷಗಳಲ್ಲಿ 14 ಬಾರಿ ಸಾರ್ವತ್ರಿಕ ಮುಷ್ಕರ ನಡೆಸಲಾಗಿದೆ. ಫೆಬ್ರುವರಿ 20 ಮತ್ತು 21ರಂದು ಚಾರಿತ್ರಿಕವಾದ ಮುಷ್ಕರ ಮಾಡ ಲಾಗಿದೆ. ಆದರೆ ಈ ಎಲ್ಲ ಹೋರಾಟಗಳಿಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಶೂನ್ಯವಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದು ಮಾತನಾಡುವ ಸೌಜನ್ಯವನ್ನೂ ಪ್ರಧಾನ ಮಂತ್ರಿ ತೋರಿಲ್ಲ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಚಾಲಕರಾದ ಅದಮಾರು ಶ್ರೀಪತಿ ಆಚಾರ್ಯ, ಕೆ. ಶಂಕರ್, ಮುಖಂಡರಾದ ಕೆ.ವಿ. ಭಟ್, ಯು. ಶಿವರಾಯ, ಶಶಿಧರ ಗೊಲ್ಲ, ಬಾಲಗಂಗಾಧರ ರಾವ್ ಸೇರಿದಂತೆ ಅನೇಕ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.