ಹೊಸಕೋಟೆ: `ನೀರಿಲ್ಲದೆ ತೊಂದರೆಗೊಳಗಾಗಿರುವ ರೈತರು ಜೀವನ ಉತ್ತಮ ಪಡಿಸಿಕೊಳ್ಳುವಲ್ಲಿ ತಮ್ಮ ಜಮೀನಿನ ಸ್ವಲ್ಪಜಾಗದಲ್ಲಿ ಉತ್ತಮ ಬೆಲೆ ದೊರೆಯುತ್ತಿರುವ ರೇಷ್ಮೆ ಬೆಳೆ ಬೆಳೆಯವಂತಾಗಬೇಕು, ಬೆಳೆ ಬೆಳೆಯುವವರಿಗೆ ಪ್ರೋತ್ಸಾಹಿಸುವಲ್ಲಿ ಸರ್ಕಾರ ಶೇಕಡಾ 75 ರಷ್ಟು ಸಹಾಯಧನ ಸಹ ನೀಡುತ್ತಿದೆ' ಎಂದು ಸಚಿವ ಬಿ.ಎನ್.ಬಚ್ಚೇಗೌಡ ಕಿವಿಮಾತು ಹೇಳಿದರು.
ಇಲ್ಲಿಗೆ ಸಮೀಪದ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದ ಮದ್ದೂರಮ್ಮ ದೇವಿ ದನಗಳ ಜಾತ್ರೆಯಲ್ಲಿನ ಉತ್ತಮ ರಾಸುಗಳಿಗೆ ಬುಧವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪಂಚಾಯಿತಿ ಕೇಂದ್ರವಾದ ಕುಂಬಳಹಳ್ಳಿ ಹಾಗು ಆಲಪ್ಪನಹಳ್ಳಿ ಗ್ರಾಮದ ಅಭಿವೃದ್ಧಿಗಾಗಿ ಅವುಗಳನ್ನು ಸುವರ್ಣಗ್ರಾಮ ಯೋಜನೆಗೆ ಸೇರಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಸಿಇಒ ಕೃಷ್ಣಪ್ಪ ಕೋಡಿಪಾಳ್ಯ, ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ, ಮುಖಂಡ ಬಿ.ಎಂ.ನಾರಾಯಣಸ್ವಾಮಿ ಅವರು ಮಾತನಾಡಿದರು.
ಉತ್ತಮ ರಾಸುಗಳಿಗೆ ಹಾಗು ಕೃಷಿ, ತೋಟಕಾರಿಕೆಯಲ್ಲಿ ಉತ್ತಮ ಬೆಳೆ ಬೆಳೆದವರಿಗೆ ಬಹುಮಾನ ವಿತರಿಸಲಾಯಿತು. ಎಪಿಎಂಸಿ ವತಿಯಿಂದ ಅತ್ಯುತ್ತಮ ರಾಸುಗಳ ಮಾಲೀಕರಿಗೆ ಪ್ರೋತ್ಸಾಹಿಸುವಲ್ಲಿ 28 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.