ಬೆಳಗಾವಿ: ನಮ್ಮ ಅರಣ್ಯ ಪರಿಸರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಮೂಲಭೂತ ಸೌಕರ್ಯ ವೃದ್ಧಿ ಉದ್ದೇಶದಿಂದ ಅತಿ ಹೆಚ್ಚು ಅರಣ್ಯ ಪ್ರದೇಶ ನಾಶವಾಗುತ್ತಿದೆ. ಉತ್ತಮ ಪರಿಸರ ನಿರ್ವಹಣೆಯಿಂದ ಮಾತ್ರ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಗುರುವಾರ ಇಲ್ಲಿ ತಿಳಿಸಿದರು.
ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆ, ಬೆಳಗಾವಿ ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಅಸಮರ್ಪಕ ಪರಿಸರ ನಿರ್ವಹಣೆಯಿಂದ ಅಸಮತೋಲನ ಉಂಟಾಗಿದೆ. ಮುಖ್ಯವಾಗಿ ಪರಿಸರ ಕಾಳಜಿ, ಸಂರಕ್ಷಣೆಯ ಅನಿವಾರ್ಯತೆ ಯನ್ನು ಜನತೆಗೆ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದು ಅವರು ಸಲಹೆ ಮಾಡಿದರು.
ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ. ವಾಸುದೇವ, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎನ್.ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಕಿನಮಠ. ಅಮೃತ ಚರಂತಿಮಠ, ಡಾ. ಎ.ಕೆ.ಎಸ್. ಸ್ವಾಮಿ ಭಾಗವಹಿಸಿದ್ದರು.ತರಬೇತಿ ಸಂಸ್ಥೆಯ ಪ್ರಾಚಾರ್ಯ ವಿ.ಎ. ಲೋಖಂಡೆ ಉಪಸ್ಥಿತರಿದ್ದರು. ಎಸ್.ಸಿ. ಹಿರೇಮಠ ನಿರೂಪಿಸಿದರು. ಅರವಿಂದ ಎಂ.ಪಿ. ವಂದಿಸಿದರು.