ಯಲಹಂಕ: `ವಿವಿಧ ಜಾತಿ, ಧರ್ಮ ಮತ್ತು ಗುಣಗಳನ್ನು ಹೊಂದಿರುವ ಮಕ್ಕಳನ್ನು ಉತ್ತಮ ರೀತಿಯಲ್ಲಿ ರೂಪಿಸಿ ಸಮಾಜಕ್ಕೆ ಕೊಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ' ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಬಾಗಲೂರು ಗ್ರಾಮದ ಗುರುವಂದನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, `ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ದೇಶದ ರಾಷ್ಟ್ರಪತಿಯಾದರು. ಇದಕ್ಕೆ ಅವರ ಪರಿಶ್ರಮವೇ ಕಾರಣ. ಅವರ ಹಾದಿಯಲ್ಲಿ ಸಾಗುವ ಮೂಲಕ ಒಳ್ಳೆಯ ವಿದ್ಯೆಯನ್ನು ಮಕ್ಕಳಿಗೆ ಧಾರೆಯೆರೆದು ಉತ್ತಮ ಪ್ರಜೆಗಳನ್ನು ರೂಪಿಸಬೇಕು' ಎಂದರು.
ಭರವಸೆ: `ಬಾಗಲೂರು ಗ್ರಾಮದಲ್ಲಿ ಜಾಗ ಒದಗಿಸಿದರೆ ಪ್ರಾಥಮಿಕ ಶಾಲೆಗೆ ಐದು ಕೊಠಡಿಗಳನ್ನು ನಿರ್ಮಿಸಿ, ಅಗತ್ಯವಿರುವ ಎಲ್ಲ ಪೀಠೋಪಕರಣಗಳನ್ನು ನೀಡಲಾಗುವುದು' ಎಂದು ಶಾಸಕರು ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶುಭ ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.