ಹೊನ್ನಾಳಿ: ಕನ್ನಡ ಭಾಷಾ ವಿಷಯದಲ್ಲಿ ಶೇ. ನೂರರಷ್ಟು ಫಲಿತಾಂಶ ಗಳಿಸಲು ಎಲ್ಲಾ ಪ್ರೌಢಶಾಲೆಗಳ ಮುಖ್ಯಸ್ಥರೂ ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಮಲ್ಲಿಕಾರ್ಜುನ್ ಹೇಳಿದರು.
ಗೊಲ್ಲರಹಳ್ಳಿಯ ವೆಂಕಟೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸೋಮವಾರ ನಡೆದ ಕನ್ನಡ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳೂ ಉತ್ತಮ ಫಲಿತಾಂಶ ಗಳಿಸಬೇಕು. ಇದಕ್ಕಾಗಿ ಶಿಕ್ಷಕರು ಗುಣಾತ್ಮಕ ಬೋಧನೆ ಮಾಡಬೇಕು. ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂದರು.
ದಾವಣಗೆರೆಯ ಸಂಪನ್ಮೂಲ ವ್ಯಕ್ತಿ ಗಣೇಶಾಚಾರ್ ದಿನವಿಡೀ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಡಿಡಿಪಿಐ ಕಚೇರಿಯ ಕನ್ನಡ ವಿಷಯ ಪರಿವೀಕ್ಷಕಿ ಲಕ್ಷ್ಮೀದೇವಿ, ಬಿಇಒ ಕಚೇರಿಯ ಕನ್ನಡ ವಿಷಯ ಪರಿವೀಕ್ಷಕ ಕರಿಸಿದ್ದಪ್ಪ, ಕನ್ನಡ ಭಾಷಾ ವೇದಿಕೆಯ ಅಧ್ಯಕ್ಷ ಬಸವರಾಜಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಎಂಪಿಎಂ ಚನ್ನಬಸಯ್ಯ, ಖಜಾಂಚಿ ಶಿವಲಿಂಗಪ್ಪ ಜಾಡರ್ ಇತರರು ಉಪಸ್ಥಿತರಿದ್ದರು.
ಆರ್.ಎಚ್. ನೂಲಗೇರಿ ಸ್ವಾಗತಿಸಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಕೀಲ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಎನ್.ಎಚ್. ರವಿಗೌಡರ್ ವಂದಿಸಿದರು.