ದಾವಣಗೆರೆ: ಪ್ರೇರಣ ಸಂಸ್ಥೆಯಿಂದ ಪ್ರತಿವರ್ಷ ನೀಡಲಾಗುವ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿವನ್ನು ಪದ್ಮಾವತಿ ವಿಜಯಕುಮಾರ್ ಅವರಿಗೆ ನೀಡಲಾಗುವುದು ಎಂದು ಪ್ರೇರಣಾ ಸಂಸ್ಥೆಯ ಕಾರ್ಯದರ್ಶಿ ಉಮಾ ನಾಗರಾಜ್ ತಿಳಿಸಿದರು.
ವನಿತಾ ಸಮಾಜದ ಅಂಗಸಂಸ್ಥೆಯಾದ ಪ್ರೇರಣಾ ಸಂಸ್ಥೆಯು ಮನೆಯಲ್ಲಿ ಉದ್ಯೋಗ ಮಾಡುವ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ, ಸ್ವಸಹಾಯ ಗುಂಪುಗಳಿಗೆ ಜಾಗೃತಿ ಶಿಬಿರ ಹಾಗೂ ಎಂಎಸ್ಎಂಇ ಸಂಸ್ಥೆಯಿಂದ ಕಿವುಡ ಮತ್ತು ಮೂಕ ಹೆಣ್ಣು ಮಕ್ಕಳಿಗೆ 6 ವಾರದ ಸಿದ್ಧ ಉಡುಗಳ ತಯಾರಿಕೆ ತರಬೇತಿಯ ಮುಕ್ತಾಯ ಸಮಾರಂಭವನ್ನು ಶನಿವಾರ ಏರ್ಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರೇರಣ ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಜಗದೀಶ್ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ನೆರವೇರಿಸಲಿದ್ದು, ಅತಿಥಿಗಳಾಗಿ ಸಿ. ಕೇಶವಮೂರ್ತಿ, ಪದ್ಮಾನಾಗಪ್ರಕಾಶ್, ಗದಿಗೇಶ ಕೆ. ಶಿರಶಿ ಭಾಗವಹಿಸಲಿದ್ದಾರೆ. ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಉಷಾ ಜಯಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.