ಮೊಳಕಾಲ್ಮುರು: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸರ್ವರಿಗೂ ಅಕ್ಷರಜ್ಞಾನ ಕಲಿಸುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಉಮಾದೇವಿ ಸಲಹೆ ನೀಡಿದರು.
ತಾಲ್ಲೂಕಿನ ತುಮಕೂರ್ಲಹಳ್ಳಿಯಲ್ಲಿ ಈಚೆಗೆ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ, ಲೋಕಶಿಕ್ಷಣ ಟ್ರಸ್ಟ್ ಬೆಂಗಳೂರು, ಜಿಲ್ಲಾ ಲೋಕಶಿಕ್ಷಣ ಸಮಿತಿ ಹಾಗೂ ತಾಲ್ಲೂಕು ಲೋಕಶಿಕ್ಷಣ ಸಮಿತಿ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ಪಾಲಯ್ಯ ಮಾತನಾಡಿ, `ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಇಲ್ಲದೇ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಎಲ್ಲರೂ ಶಿಕ್ಷಣದ ಮುಖ್ಯವಾಹಿನಿಗೆ ಕಡ್ಡಾಯವಾಗಿ ಬರಬೇಕು~ ಎಂದರು.
ಧ್ವಜಾರೋಹಣವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ಮಹೇಶ್ ನೆರವೇರಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯ್ತಿ ಸದಸ್ಯೆ ತಿಪ್ಪಮ್ಮ ಪಾಲಯ್ಯ, ಗ್ರಾ.ಪಂ. ಉಪಾಧ್ಯಕ್ಷ ಮೊಹಿದ್ದೀನ್ಸಾಬ್, ಸದಸ್ಯರಾದ ಪಾಪಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಕೆ.ಎನ್. ಶಿವಮೂರ್ತಿ, ದಾಸಯ್ಯ, ಎಸ್ಡಿಎಂಸಿ ಅಧ್ಯಕ್ಷ ಪಿ. ರಾಜಣ್ಣ ಉಪಸ್ಥಿತರಿದ್ದರು.
ಕೆ. ಶಾಂತವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ವೀರೇಶ್ ಸ್ವಾಗತಿಸಿದರು, ಕೆ. ತಿಪ್ಪೇಸ್ವಾಮಿ ವಂದಿಸಿದರು.