ಚಳ್ಳಕೆರೆ: ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರು ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಡಿವೈಎಸ್ಪಿ ಹನುಮಂತರಾಯ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಭಾನುವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ನೌಕರರ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಜನರನ್ನು ರಕ್ಷಣೆ ಮಾಡಬೇಕಾದ ಇಲಾಖೆಯಲ್ಲಿ ನೌಕರ ವರ್ಗ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಆದ್ದರಿಂದ, ದಿನನಿತ್ಯ ತಮ್ಮ ಸೇವೆಯ ಜತೆಗೆ ಉತ್ತಮ ದೈಹಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ನುಡಿದರು.
ನಿವೃತ್ತ ವೈದ್ಯಾಧಿಕಾರಿ ಡಾ.ಚಂದ್ರಾ ನಾಯ್ಕ ಮಾತನಾಡಿ, ಪೊಲೀಸರು ತಮ್ಮ ಆಹಾರ ಹಾಗೂ ದಿನನಿತ್ಯದ ಜೀವನದಲ್ಲಿ ಬಳಸುವ ಎಣ್ಣೆ ಪದಾರ್ಥಗಳನ್ನು ಕಡಿಮೆ ಮಾಡುವ ಮೂಲಕ ಅತ್ಯುತ್ತಮ ಆರೋಗ್ಯ ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಲ್. ಫಾಲಾಕ್ಷ ಮಾತನಾಡಿದರು. ಸಿಪಿಐ ಮಂಜುನಾಥ ತಳವಾರ, ನಾಗರಾಜ್, ಪಿಎಸ್ಐಗಳಾದ ವೈ.ಎಸ್. ಚಂದ್ರಶೇಖರ್, ಬಿ. ಬೋರಯ್ಯ, ಕೊಟ್ರೇಶ್, ಗಾಯತ್ರಿ, ಅಬ್ದುಲ್ ವಾಹಿದ್, ಉದ್ಯಮಿ ಎನ್.ಟಿ. ಪ್ರಕಾಶ್, ಡಾ.ತಿಪ್ಪೇಸ್ವಾಮಿ, ವೀರೇಶ್ ಮತ್ತಿತರರು ಇದ್ದರು.