ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ವಿವಿಧ ವಿಷಯಗಳ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ಬರೆಸಿದವರಲ್ಲಿ ಇನ್ನೂ ಅನೇಕರ ಕೈವಾಡವಿದ್ದು, ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಕರ್ನಾಟಕ ವಿ.ವಿ. ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಮಾಜದಲ್ಲಿ ಪ್ರಾಮಾಣಿಕತೆ, ನೈತಿಕತೆ, ಚಾರಿತ್ರ್ಯ, ಮೌಲ್ಯಗಳನ್ನು ಬೆಳೆಸಿ ಉತ್ತಮವಾದ ನಾಗರಿಕರನ್ನು ತಯಾರಿಸಬೇಕಾದ ವಿಶ್ವವಿದ್ಯಾಲಯದಲ್ಲೇ ಈ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುವಂತಿದೆ. ಈ ಪ್ರಕರಣದಲ್ಲಿ ಕೇವಲ ಕೆಳ ದರ್ಜೆಯ ನೌಕರರನ್ನು ಮಾತ್ರ ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾದ ಒಂದು ಜಾಲವಿದೆ. ಅದನ್ನು ಕೂಡಲೇ ಪತ್ತೆ ಹಚ್ಚಬೇಕು. ಆ ಅಪರಾಧಿಗಳಿಗೆ ಕಾನೂನು ರೀತಿಯ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು, ಈ ಕುರಿತಂತೆ ಪ್ರದೀಪ ಮತ್ತು ಸಂದೀಪ ಅಂಗಡಿ ಎಂಬ ಇಬ್ಬರು ಗುತ್ತಿಗೆ ನೌಕರರನ್ನು ಬಂಧಿಸಿದ್ದರೂ ಈ ದುಷ್ಕೃತ್ಯದಲ್ಲಿ ಉಪನ್ಯಾಸಕರು ಹಾಗೂ ಉನ್ನತ ಅಧಿಕಾರಿಗಳೂ ಸೇರಿದಂತೆ ಅನೇಕರ ಕೈವಾಡವಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.