ಲಖನೌ (ಪಿಟಿಐ): ಉತ್ತರ ಪ್ರದೇಶ ವಿಧಾನಸಭೆಯ ಎರಡನೇ ಹಂತದ ಚುನಾವಣಾ ಕಣದಲ್ಲಿರುವ 337 ಅಭ್ಯರ್ಥಿಗಳ ಪೈಕಿ 118 ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಚುನಾವಣಾ ಕಾವಲು ಸಮಿತಿ ಪತ್ತೆ ಹಚ್ಚಿದೆ.
ಫೆಬ್ರುವರಿ 11ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 337 ಅಭ್ಯರ್ಥಿಗಳು ಕಣದಲ್ಲಿದ್ದು, ಶೇ 35ರಷ್ಟು ಅಭ್ಯರ್ಥಿಗಳ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ ಮತ್ತು ಸುಲಿಗೆ ಮುಂತಾದ ಅಪರಾಧಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಮೌ ಮತ್ತು ಘೋಸಿ ಕ್ಷೇತ್ರದಿಂದ ಕ್ವಾಮಿ ಏಕ್ತಾ ದಳದ ಅಭ್ಯರ್ಥಿ ಮುಕ್ತಾರ್ ಅನ್ಸಾರಿ ವಿರುದ್ಧ ಗರಿಷ್ಠ ಅಂದರೆ 15 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಅಭ್ಯರ್ಥಿಗಳಲ್ಲಿ ಸಮಾಜವಾದಿ ಪಕ್ಷದವರೇ ಹೆಚ್ಚಾಗಿದ್ದು, ಈ ಪಕ್ಷದ 30 ಅಭ್ಯರ್ಥಿಗಳು, ಬಿಎಸ್ಪಿ 23, ಬಿಜೆಪಿ 20, ಕಾಂಗ್ರೆಸ್ 19 ಮತ್ತು ಶಾಂತಿ ಪಕ್ಷ 8 ಮತ್ತು ಜೆಡಿಯುನ 12 ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
337 ಅಭ್ಯರ್ಥಿಗಳಲ್ಲಿ 138 ಜನ ಕೋಟ್ಯಧಿಪತಿಗಳಾಗಿದ್ದಾರೆ. 54.44 ಕೋಟಿ ಆಸ್ತಿ ಹೊಂದಿರುವ ಮುಬಾರಖ್ಪುರದ ಬಿಎಸ್ಪಿ ಅಭ್ಯರ್ಥಿ ಶಹಾ ಅಲಂ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಇವರಲ್ಲಿ 166 ಅಭ್ಯರ್ಥಿಗಳು ಆದಾಯ ತೆರಿಗೆ ರಿಟರ್ನ್ಸ್ ಪಾವತಿಸಿಲ್ಲ ಎಂಬುದನ್ನು ಸಮಿತಿ ಪತ್ತೆ ಹಚ್ಚಿದೆ.
ಮಣಿಪುರ: ಶಾಂತಿಯುತ ಮರು ಮತದಾನ
ಗುವಾಹಟಿ(ಐಎಎನ್ಎಸ್): ಮಣಿಪುರ ವಿಧಾನಸಭೆಗೆ ಐದು ಗುಡ್ಡಗಾಡು ಜಿಲ್ಲೆಗಳ 34 ಮತಗಟ್ಟೆಗಳಲ್ಲಿ ಶನಿವಾರ ಮರುಮತದಾನ ಶಾಂತಿಯುತವಾಗಿ ನಡೆಯಿತು.
ಎಂಟು ಮತಗಟ್ಟೆ ಹೊಂದಿದ್ದ ಚಂದೇಲ್ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ ಶೇ.82 ಮತದಾನವಾಗಿದ್ದು, ಒಂಬತ್ತು ಮತಗಟ್ಟೆ ಇರುವ ಉಖ್ರುಲ್ನಲ್ಲಿ ಶೇ.78.08 ಮತದಾನವಾಗಿದೆ ಎಂದು ಮಣಿಪುರದ ಮುಖ್ಯ ಚುನಾವಣಾಧಿಕಾರಿ ಪಿ.ಸಿ. ಲಾಂಕುಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜನವರಿ 28ರಂದು ನಡೆದ ಚುನಾವಣೆ ವೇಳೆ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಈ ಮತಗಟ್ಟೆಗಳಲ್ಲಿ ಮರು ಮತದಾನ ಘೋಷಿಸಲಾಗಿತ್ತು.