ನವದೆಹಲಿ (ಪಿಟಿಐ): ದೇಶದ ರಾಜಧಾನಿ ದೆಹಲಿ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಶನಿವಾರ ಭಾರಿ ಮಳೆಯಾಗಿದ್ದು, ಮಳೆಯ ಅನಾಹುತಕ್ಕೆ ಮೂವರು ಬಲಿಯಾಗಿದ್ದಾರೆ.
ದೆಹಲಿಯಲ್ಲಿ ಎಡೆಬಿಡದೆ ಮಳೆ ಸುರಿದಿದ್ದರಿಂದ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಯಿತು ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತು.
ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಎರಡು ಮೆಟ್ರೊ ನಿಲ್ದಾಣಗಳನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿತ್ತು.
ಹಿಮಾಚಲಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭೂಕುಸಿತ ಮತ್ತು ಪ್ರವಾಹಕ್ಕೆ ಸಿಕ್ಕಿ ಮೂವರು ಸತ್ತಿದ್ದಾರೆ. ಅನೇಕ ಮನೆಗಳಿಗೆ ಹಾನಿ ಉಂಟಾಗಿದೆ.
ಚಾಲಕನೊಬ್ಬ ತನ್ನ ಟ್ರಕ್ಕಿನಲ್ಲಿ ಇತರ ಇಬ್ಬರ ಜತೆ ಮಲಗಿದ್ದಾಗ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದರಿಂದ ಸತ್ತಿದ್ದಾನೆ. ಇತರ ಇಬ್ಬರು ಪಾರಾಗಿದ್ದಾರೆ. ಮೆಹಾಸ್ಕವಾಲ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಉತ್ತರಾಖಂಡದಲ್ಲೂ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ರಸ್ತೆ ದುರಸ್ತಿ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಇದರಿಂದ ಪರಿಹಾರ ಸಾಮಗ್ರಿ ವಿತರಣೆಗೆ ತೊಂದರೆಯಾಗಿದೆ. ಭಾರಿ ಮಳೆಯಿಂದಾಗಿ ಕೇಂದ್ರ ರೈಲ್ವೆಯ ನಾಗ್ಪುರ- ವಾರ್ಧಾ ವಿಭಾಗದ ಸಿಂದಿ ಮತ್ತು ತುಳಜಾಪುರ ಮಧ್ಯೆ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಈ ಭಾಗದಲ್ಲಿ ಸಣ್ಣ ಸೇತುವೆಗಳು ಮತ್ತು ಹಳಿಯ ಕೆಳಭಾಗದ ಜಲ್ಲಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಮಾರ್ಗದ ಅನೇಕ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.