ಬೆಂಗಳೂರು:ಸುಬ್ರಹ್ಮಣ್ಯಪುರ ಸಮೀಪದ ಉತ್ತರಹಳ್ಳಿ ವೃತ್ತದ ಬಳಿಯಲ್ಲಿ ಸೆ.18ರಂದು ಆಟೊದಿಂದ ಕಾಣೆಯಾಗಿದ್ದ ನಾಲ್ಕು ತಿಂಗಳ ಗಂಡು ಮಗು ಕತ್ತರಿಗುಪ್ಪೆ ಬಳಿ ಶನಿವಾರ ಪತ್ತೆಯಾಗಿದೆ.
ಮಗು ಕಾಣೆಯಾಗಿರುವ ಬಗ್ಗೆ ಪೋಷಕರಾದ ಸುಧೀಂದ್ರ ಮತ್ತು ಜ್ಯೋತಿ, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಸೆ.19ರಂದು ದೂರು ದಾಖಲಿಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಜ್ಯೋತಿ ಹಾಗೂ ಅವರ ತಾಯಿ ಸೆ.18ರಂದು ಬೆಳಿಗ್ಗೆ 11ಗಂಟೆ ಸುಮಾರಿಗೆ ಉತ್ತರಹಳ್ಳಿ ವೃತ್ತದಲ್ಲಿನ ಕ್ಲಿನಿಕ್ಗೆ ಕರೆದುಕೊಂಡು ಬಂದಿದ್ದರು.
ಚಿಕಿತ್ಸೆ ನಂತರ ಮನೆಗೆ ಹಿಂದಿರುಗುವಾಗ ಮಾರ್ಗಮಧ್ಯೆ ಔಷಧ ಮಳಿಗೆಯೊಂದರ ಬಳಿ ಆಟೊ ನಿಲ್ಲಿಸಿದ ಜ್ಯೋತಿ ಹಾಗೂ ಅವರ ತಾಯಿ, ಮಗುವನ್ನು ಆಟೊದಲ್ಲೇ ಬಿಟ್ಟು ಔಷಧ ತರಲು ಮಳಿಗೆ ಬಳಿ ಹೋಗಿದ್ದರು. ಆದರೆ, ಔಷಧ ತೆಗೆದುಕೊಂಡು ವಾಪಸ್ ಬರುವ ವೇಳೆಗೆ ಆಟೊದಲ್ಲಿ ಮಗು ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಮುಳುಗಿ ಸಾವು
ವ್ಯಕ್ತಿಯೊಬ್ಬರು ನಿರ್ಮಾಣ ಹಂತದ ಕಟ್ಟಡದ ಕೆಳ ಅಂತಸ್ತಿನಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪುರಭವನ ಸಮೀಪದ ಓಟಿಸಿ ರಸ್ತೆಯ ಬಳಿ ಶನಿವಾರ ರಾತ್ರಿ ನಡೆದಿದೆ.
ಓಟಿಸಿ ರಸ್ತೆಯ ಸಮೀಪ ವಾಣಿಜ್ಯ ಕಟ್ಟಡವೊಂದು ನಿರ್ಮಾಣ ವಾಗುತ್ತಿದ್ದು, ಆ ಕಟ್ಟಡದ ಕೆಳ ಅಂತಸ್ತಿನಲ್ಲಿ ಏಳೆಂಟು ಅಡಿ ಮಳೆ ನೀರು ನಿಂತಿತ್ತು. ರಾತ್ರಿ ಪಾನಮತ್ತನಾಗಿ ಕಟ್ಟಡದ ಬಳಿ ಹೋಗಿರುವ ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ವಯಸ್ಸು ಸುಮಾರು 50 ವರ್ಷ. ಆದರೆ, ಆತನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸಿಲ್ವರ್ಜ್ಯುಬಿಲಿ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದೆ.