ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡ ದುರಂತದಲ್ಲಿ 92 ಜನ ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 4,120 ಜನ ಕಣ್ಮರೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಇದೀಗ ಅಂತಿಮವಾಗಿ ಮಾಹಿತಿ ನೀಡಿದೆ.
ಪ್ರವಾಹ, ಭೂಕುಸಿತ ಮತ್ತಿತರ ನೈಸರ್ಗಿಕ ವಿಕೋಪಗಳಿಗೆ ಸಿಕ್ಕವರಲ್ಲಿ ಈತನಕ 4,120 ಜನ ಪತ್ತೆಯಾಗಿಲ್ಲ ಇವರಲ್ಲಿ 421 ಮಕ್ಕಳೂ ಸೇರಿದ್ದಾರೆ. ಈ ಎಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಅಂತಿಮವಾಗಿ ಘೋಷಿಸಿ ರಾಜ್ಯವಾರು ಪಟ್ಟಿ ಬಿಡುಗಡೆ ಮಾಡಿದೆ.
ನಾಪತ್ತೆಯಾದವರಲ್ಲಿ ಅತ್ಯಧಿಕ ಜನ ಉತ್ತರಪ್ರದೇಶಕ್ಕೆ ಸೇರಿದವರು. ನಾಪತ್ತೆಯಾದ ಮಕ್ಕಳಲ್ಲಿ 168 ಉತ್ತರಾಖಂಡಕ್ಕೆ ಸೇರಿದ್ದರೆ 96 ಮಕ್ಕಳು ಉತ್ತರ ಪ್ರದೇಶದವರು.
ನೆರೆಯ ನೇಪಾಳ ಸೇರಿದಂತೆ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ಕೈಗೊಂಡಿದ್ದು, ಅಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದ ನಂತರ ಈ ಪಟ್ಟಿ ಅಂತಿಮವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.