ನವದೆಹಲಿ(ಪಿಟಿಐ): ‘ಪ್ರಕೃತಿ ವಿಕೋಪಕ್ಕೆ ಒಳಗಾದ ಉತ್ತರಾಖಂಡದಲ್ಲಿ ಕೈಗೊಂಡ ಪರಿಹಾರ ಕ್ರಮಗಳಿಗೆ ಸಂಬಂಧಿಸಿದಂತೆ ನಮ್ಮ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕು ಇಲ್ಲವೇ ನಾವು ಹೊರಡಿಸುವ ಕಠಿಣ ಆದೇಶವನ್ನು ಎದುರಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ) ಗುರುವಾರ ಎಚ್ಚರಿಕೆ ನೀಡಿದೆ.
‘ಜನರ ಕಲ್ಯಾಣ, ಪರಿಸರ ಸಮತೋಲನ ಹಾಗೂ ಮರುಸ್ಥಾಪನೆ, ಪ್ರಕೃತಿ ವಿಕೋಪದಂತಹ ಘಟನೆ ಮರುಕಳಿಸದಂತೆ ಕೈಗೊಂಡ ಕ್ರಮಗಳ ಕುರಿತು ಅ. 11ರಂದು ನ್ಯಾಯಮಂಡಳಿಗೆ ತಿಳಿಸಲು ರಾಜ್ಯ ಸರ್ಕಾರ ವಿಫಲವಾದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಇತರ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜರಾಗುವಂತೆ ನಿರ್ದೇಶನ ನೀಡಬೇಕಾಗುತ್ತದೆ’ ಎಂದು ನ್ಯಾಯಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಸ್ಪಷ್ಟಪಡಿಸಿದರು.
ಉತ್ತರಾಖಂಡ ಸರ್ಕಾರದ ಪರ ನ್ಯಾಯಮಂಡಳಿ ಎದುರು ಹಾಜರಾದ ವಕೀಲರು, ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಮೇಲಿನಂತೆ ಖಾರವಾಗಿ ಹೇಳಿದೆ.