ನವದೆಹಲಿ (ಪಿಟಿಐ): ಗಂಗಾ ನದಿಗೆ ಪ್ರವಾಹ ಬಂದರೆ ಅನುಸರಿಸಬೇಕಾದ ನಿಯಂತ್ರಣ ಕ್ರಮಗಳ ಕುರಿತು ಮಾರ್ಗಸೂಚಿ ಸಿದ್ಧಪಡಿಸಲು ಮತ್ತು ನದಿ ಪಾತ್ರದಲ್ಲಿರುವ ಪ್ರದೇಶಗಳಲ್ಲಿ ಯಾವ ರೀಞತಿ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಉತ್ತರಾಖಂಡಕ್ಕೆ ಪರಿಣಿತರ ತಂಡವೊಂದನ್ನು ಕಳುಹಿಸಿದೆ.
ತಂಡವು ಪ್ರವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಹರೀಶ್ ರಾವತ್ ಪುಣೆಯಲ್ಲಿರುವ ಕೇಂದ್ರ ಜಲ ಮತ್ತು ವಿದ್ಯುತ್ ಸಂಶೋಧನಾ ಸಂಸ್ಥೆ (ಸಿಡಬ್ಲುಪಿಆರ್ಎಸ್)ಗೆ ಸೂಚಿಸಿದ್ದಾರೆ.
ಸಿಡಬ್ಲುಪಿಆರ್ಎಸ್ ತಂಡವು ನೀರಾವರಿ ಇಲಾಖೆಯ ಎಂಜಿನಿಯರ್ಗಳೊಂದಿಗೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಪ್ರದೇಶವನ್ನೂ ವೀಕ್ಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಅವಶೇಷ ತೆರವಿಗೆ ತಂಡ: ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಲು ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಒಳಗೊಂಡ 61 ಮಂದಿಯ ತಂಡ ಶನಿವಾರದಿಂದ ಕಾರ್ಯಪ್ರವೃತ್ತವಾಗಿದೆ.
ಅವಶೇಷಗಳನ್ನು ತೆಗೆಯಲು ತಂಡಕ್ಕೆ ಬೇಕಾಗಿರುವ ಎಲ್ಲ ಸಲಕರಣೆಗಳನ್ನು ಕೇದಾರನಾಥಕ್ಕೆ ಸಾಗಿಸಲಾಗಿದೆ ಎಂದು ಪೊಲೀಸ್ ಮಹಾನಿದೇರ್ಶಕ ರಾಮ್ ಸಿಂಗ್ ಮೀನಾ ತಿಳಿಸಿದ್ದಾರೆ.
ಸಾತೋಪಂಥ್ ಎಂಬಲ್ಲಿ ಹಿಮ ಸರೋವರ ನಿರ್ಮಾಣವಾಗಿದ್ದು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದರಿಂದಾಗುವ ಹಾನಿಯ ಕುರಿತು ಅಂದಾಜು ನಡೆಸಬೇಕು ಎಂದು ಚಮೋಲಿ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಘಟಕಕ್ಕೆ ಪತ್ರ ಬರೆದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಹೇಳಿದ್ದಾರೆ.
ಸತತ ಮಳೆಯಿಂದಾಗಿ ಗಂಗಾ ನದಿ ಅಪಾಯದ ಮಟ್ಟ ಮಿರಿ ಹರಿಯುವ ಸಾಧ್ಯತೆಯಿದ್ದು, ನದಿ ತಟದಲ್ಲಿರುವ ಹಳ್ಳಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ರವಾನಿಸಿದೆ.