ನವದೆಹಲಿ (ಪಿಟಿಐ): ಕೈಗಾರಿಕಾ ಉತ್ಪಾದನೆಯು ಮುಂದಿನ 6 ತಿಂಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ಆರ್ಥಿಕ ಉತ್ತೇಜನಾ ಕೊಡುಗೆ ರದ್ದುಪಡಿಸಬಾರದು ಅಥವಾ ಅಬಕಾರಿ ಸುಂಕ ಹೆಚ್ಚಿಸಬಾರದು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು (ಎಫ್ಕೆಸಿಸಿಐ-ಫಿಕ್ಕಿ) ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.
ಕಚ್ಚಾ ಸರಕಿನ ಬೆಲೆ ಹೆಚ್ಚಳ, ಅಹಾರ ಹಣದುಬ್ಬರ ಏರಿಕೆಯು ಅರ್ಥ ವ್ಯವಸ್ಥೆಯ ಇತರ ವಲಯಗಳಿಗೆ ವಿಸ್ತರಿಸುವ ಸಾಧ್ಯತೆ ಮತ್ತಿತರ ಕಾರಣಗಳಿಗಾಗಿ ಕೈಗಾರಿಕೆ ಉತ್ಪಾದನೆಯು ಕುಂಠಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉತ್ತೇಜನಾ ಕೊಡುಗೆಗಳನ್ನು ರದ್ದುಪಡಿಸಬಾರದು. ಅದರಲ್ಲೂ ವಿಶೇಷವಾಗಿ ಅಬಕಾರಿ ಸುಂಕ ಹೆಚ್ಚಿಸಬಾರದು ಎಂದು ‘ಫಿಕ್ಕಿ’ ಮನವಿ ಮಾಡಿಕೊಂಡಿದೆ.
ಸರಕು- ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಲಾಗಿದೆ. ಆರ್ಥಿಕ ವೃದ್ಧಿ ದರವು 2011-12ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟಿನ ಪೂರ್ವದ ಶೇ 9ರ ಮಟ್ಟಕ್ಕೆ ಮರಳುವ ಸಾಧ್ಯತೆ ಇರುವುದರಿಂದ ಉತ್ತೇಜನಾ ಕೊಡುಗೆಗಳನ್ನು ಕೈಬಿಡಬಹುದಾಗಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ‘ಫಿಕ್ಕಿ’ ಈ ಸಲಹೆ ನೀಡಿದೆ.