ತಿಪಟೂರು: ರೈತರಿಂದ ಉತ್ಸವ, ಮೆರವಣಿಗೆ ಮಾಡಿಸಿಕೊಳ್ಳುವರು ಅದನ್ನು ಬಿಟ್ಟು ಅನ್ನದಾತನ ಸಮಸ್ಯೆ ನಿವಾರಿಸುವ ಸಂಚಲನ ಶಕ್ತಿಯಾಗಬೇಕು ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸಲಹೆ ನೀಡಿದರು.
ಜಿಲ್ಲಾ ವಿಜ್ಞಾನ ಕೇಂದ್ರದ ಸಹಕಾರದಲ್ಲಿ ವಿವಿಧ ಸಂಘಟನೆ ವತಿಯಿಂದ ತಾಲ್ಲೂಕಿನ ಬಿದರೆಗುಡಿಯಲ್ಲಿ ಶನಿವಾರ ನಡೆದ ಅಂದು ಉಪ್ಪು ಇಂದು ಬೀಜ ಜಾಗೃತಿ~ ಆಂದೋಲನ ಜಾಥಾದಲ್ಲಿ ಮಾತನಾಡಿದ ಅವರು, ಕೃಷಿ ಕೇಂದ್ರಿತ ವ್ಯಾಪಾರೀಕರಣದ ದಾಳಿಯಿಂದ ತತ್ತರಿಸುವ ರೈತ ಅಳಿದುಳಿದ ದೇಸಿ ಮೂಲ ಬೀಜಗಳನ್ನಾದರೂ ರಕ್ಷಿಸಿಕೊಳ್ಳದಿದ್ದರೆ ಸ್ವಾಯತ್ತತೆಗೆ ಸಂಚಕಾರ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಕೇಂದ್ರಿತ ವ್ಯಾಪಾರೀಕರಣ ದಿಂದ ಬೀಜಕ್ಕಾಗಿ ರೈತ ಕೈಚಾಚಿ ನಿಲ್ಲಬೇಕಾಗಿದೆ. ಬೀಜ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಕಸಿಯಲು ಸರ್ಕಾರ ನಡೆಸಿರುವ ಪ್ರಯತ್ನವನ್ನು ವಿಫಲಗೊಳಿಸದಿದ್ದರೆ ಗಂಡಾಂತರ ಎದುರಾಗಲಿದೆ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ, ಜಿಲ್ಲಾ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಮಾರ್ಗೋನಹಳ್ಳಿ ಸದಾಶಿವಯ್ಯ, ತಾಲ್ಲೂಕು ಸಮಿತಿಯ ಡಾ.ನಂಜುಂಡಪ್ಪ, ಇಕ್ರಾ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ, ಬೈಫ್ನ ರಾಮಕೃಷ್ಣ ಗುಂಜೂರು, ಪ್ರೊ. ಕೆ.ಆರ್. ಬಸವರಾಜು, ಡಾ.ಪರಮಶಿವಯ್ಯ ಮಾತನಾಡಿದರು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಎಸ್.ದೇವರಾಜು, ಕೆ.ಎಸ್.ಸದಾಶಿವಯ್ಯ, ಉಜ್ಜಜ್ಜಿ ರಾಜಣ್ಣ, ಡಾ.ತಿಮ್ಮಯ್ಯ ಪಾಲ್ಗೊಂಡಿದ್ದರು. ದೇಶಿ ಬೀಜ ಸಂರಕ್ಷಣೆಗಾಗಿ ಮಲ್ಲಮ್ಮ, ಚಂದ್ರಪ್ರಕಾಶ್, ಗಿರೀಶ್, ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಮೂಲ ಬೀಜಗಳ ಪ್ರದರ್ಶನವಿತ್ತು.