ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹ ಪಣಕ್ಕಿಟ್ಟು ಗೆದ್ದವರು

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಲ್ಲಿದ್ದವರ ಮನಗಳೆಲ್ಲವೂ ಗೆಲ್ಲುವ ಕುದುರೆಯ ಬೆನ್ನುಹತ್ತಿದ್ದವು, `ಟ್ಯಾಲೆಂಟ್ ಯಾರೊಬ್ಬರ ಸ್ವತ್ತಲ್ಲ~ ಎನ್ನುವಂತೆ. ಡಯಾನ ಹೇಡನ್ ಕಾಫಿ ಕಪ್ಪಿಗೆ ತುಟಿ ಸೋಕಿಸುತ್ತ ನಿಧಾನಕ್ಕೆ ಕಾಫಿ ಆಸ್ವಾದಿಸುತ್ತಿದ್ದರು. ಸ್ಪರ್ಧಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡುತ್ತ ಹುರಿದುಂಬಿಸುತ್ತಿದರು.

ಸ್ಪರ್ಧೆ ಎರಡು ಗಂಟೆ ತಡವಾಗಿ ಆರಂಭವಾರೂ ಪ್ರೇಕ್ಷಕರು ಸಹನೆಯಿಂದಲೇ ಇದ್ದರು. ಆತ್ಮವಿಶ್ವಾಸದ ನಗೆ ತುಳುಕಿಸುತ್ತ ಉತ್ಸಾಹವನ್ನು ಇತರರಿಗೂ ಹಂಚುವ ಉಮೇದಿನಿಂದ ವೇದಿಕೆ ಹತ್ತಿ ಬಂದರು. ಗೆದ್ದೇ ಗೆಲ್ಲುತ್ತೇವೆಂಬ ಅದಮ್ಯ ಚೇತನ ಅವರಲ್ಲಿ.

ಇದು ಕಂಡುಬಂದದ್ದು ಟ್ರಿನಿಟಿ ಸರ್ಕಲ್ ಬಳಿ ಇರುವ ಮದರ್ ತೆಲ್ಕಾ ಆಡಿಟೋರಿಯಂನಲ್ಲಿ. ಮಾರುತಿ ಸುಜುಕಿ ನಡೆಸಿದ `ಕಲರ್ಸ್‌ ಆಫ್ ಯೂತ್~ ದಕ್ಷಿಣ ವಲಯದ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರು, ಚೆನ್ನೈ, ಹೈದರಾಬಾದ್‌ನಿಂದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು.

ಮಾಜಿ ವಿಶ್ವ ಸುಂದರಿ ಡಯಾನ ಹೇಡನ್ ಹಾಗೂ `ಪರಿಕ್ರಮ~ ಸಂಸ್ಥೆಯ ನಿರ್ದೇಶಕ ಸುಬಿರ್ ಮಲ್ಲಿಕ್ ತೀರ್ಪುಗಾರರಾಗಿದ್ದರು.

ನಿರೂಪಕಿ ರಶ್ಮಿ ನಿಗಂ ಸ್ಪರ್ಧಿಗಳನ್ನು ವೇದಿಕೆಗೆ ಆಹ್ವಾನಿಸಿ ಮೈಕ್ ನೀಡಿದೊಡನೆ, ಅದುವರೆಗೂ ಅದುಮಿಟ್ಟ ಹುಮ್ಮಸ್ಸನ್ನು ಒಮ್ಮೆಲೇ ಹೊರಹಾಕಿದರು.
 
ಚೆನ್ನೈನ ಕ್ರೈಸ್ಟ್ ವಿವಿ ವಿದ್ಯಾರ್ಥಿ ಫಾತಿಮಾ ರಾಜ್ `ತ್ರಿ ಈಡಿಯಟ್ಸ್~ ಚಿತ್ರದ `ಜಾನೆ ನಹಿ ದೇಂಗೆ ತುಝೆ... ಜಾನೆ ತುಝೆ~ ಹಾಡಿನ ಟ್ರ್ಯಾಕ್‌ಗೆ ತಮ್ಮ ಧ್ವನಿಗೂಡಿಸಿದರು. ಈ ಹಾಡಿನಿಂದ ಸ್ಪರ್ಧೆ ಆರಂಭವಾಯಿತು.
 
ಚೆನ್ನೈನ ಗ್ರೇಟ್ ಲೇಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೇನೇಜ್‌ಮೆಂಟ್ ವಿದ್ಯಾರ್ಥಿ ಅಭಿಶು ರಕ್ಷಿತ್ ತಾವೇ ಬರೆದ ಸಾಲುಗಳಿಗೆ ಜೀವತುಂಬಿ ಹಾಡಿದರು.

ಹೈದರಾಬಾದ್‌ನ ಐಬಿಎಸ್ ವಿವಿಯ ಶ್ರೀಜು ಪ್ರೇಮ್ ರಂಜನ್ `ತುಮ್‌ಸೆ ಯು ಮಿಲೇಂಗೆ ಹಮ್...~ ಎಂದು ಹಾಡಲು ಶುರುವಿಟ್ಟರು. ಇನ್ನೊಂದು ಕಾಲೇಜು ವಿದ್ಯಾರ್ಥಿಗಳು ತಿಳಿನೀಲಿ ಉಡುಪು ದರಿಸಿ ಹಾಡಿಗೆ ಹಜ್ಜೆ ಹಾಕಿದರು.

ಮತ್ತೊಂದು ಕಾಲೇಜು ವಿದ್ಯಾರ್ಥಿಗಳು ಕಪ್ಪು ಶರ್ಟ್, ಜೀನ್ಸ್ ಹಾಕಿ ಥಕಧಿಮಿತ ಎಂದು ಕುಣಿದರು.


ಸ್ಪರ್ಧಿಯೊಬ್ಬರನ್ನು ಮೆಚ್ಚಿ, ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಡಯಾನ ಉಡುಗೊರೆಯಾಗಿ ನೀಡಿದರು. ನಾಚಿದ ಹುಡುಗ, ಕಲ್ಲಂಗಡಿಯಂತೆಯೇ ಕೆಂಪುಕೆಂಪಾದ.

`ವೇದಿಕೆಗೆ ಬಂದಮೇಲೆ ಯಾವುದೇ ಕಾರಣಕ್ಕೂ ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಸ್ಪರ್ಧೆಗೆಂದು ಇಷ್ಟು ದಿನಗಳ ನಿಮ್ಮ ಅಮೂಲ್ಯ ಸಮಯ ಮತ್ತು ಶ್ರಮ ಎಲ್ಲವೂ  ವ್ಯರ್ಥವಾಗುತ್ತದೆ~ ಎಂದು ಡಯಾನ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದರು.

ನೋಡನೋಡುತ್ತಲೇ ಸ್ಪರ್ಧೆ ಮುಗಿದೇ ಹೋಯಿತು. ಆಮೇಲೇನಿದ್ದರೂ ಎಲ್ಲರ ಎದೆಯಲ್ಲಿ ಢವ...ಢವ...  

ದೇಶದ ನಾನಾ ಭಾಗಗಳಲ್ಲಿರುವ ಎಂಜಿನಿಯರಿಂಗ್ ಹಾಗೂ ಮೇನೇಜ್‌ಮೆಂಟ್ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಮಾರುತಿ ಸುಜುಕಿ ವೇದಿಕೆ ಒದಗಿಸಿತ್ತು.

ಈಗಾಗಲೇ ಪ್ರಾರಂಭಿಕ ಹಂತದ ಸುತ್ತುಗಳು ಮುಗಿದಿದ್ದು, ಫೈನಲ್ ಹಂತಕ್ಕೆ ತಲುಪುವ ಪ್ರತಿಭೆಯ ಹುಡುಕಾಟದ ಬೇಟೆ ಇಲ್ಲಿ ನಡೆಯಿತು.

ದೆಹಲಿಯಲ್ಲಿ ಫೈನಲ್ ಸ್ಪರ್ಧೆ ನಡೆಯಲಿದ್ದು, ವಿಜಯಿ ಸ್ಪರ್ಧಾರ್ಥಿಗೆ `ಮಾರುತಿ ಸುಜುಕಿ ರಿಟ್ಜ್~ ಕಾರು ಬಹುಮಾನ.

ದೇಶದ 22 ಕಾಲೇಜುಗಳ ಒಟ್ಟು 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು. ದಕ್ಷಿಣ ವಲಯದ ಸುತ್ತಿನಲ್ಲಿ ಒಟ್ಟು ಎಂಟು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆಹಚ್ಚಿದರು.

ದೆಹಲಿ, ಚಂಡೀಗಡ, ಹೈದರಾಬಾದ್, ಕೋಲ್ಕತ್ತ, ಇಂದೋರ್, ಲಖನೌ, ಚೆನ್ನೈ, ಮುಂಬೈ, ಬೆಂಗಳೂರು ಹೀಗೆ ಒಟ್ಟು 10 ನಗರಗಳಲ್ಲಿ ಸ್ಪರ್ಧೆಯ ವಿವಿಧ ಹಂತಗಳು ನಡೆದಿವೆ. 

ಫೈನಲ್ ಪ್ರವೇಶಿಸಿದವರು

ಚೆನ್ನೈನ ಗ್ರೇಟ್ ಲೇಕ್ಸ್ ಇನ್‌ಸ್ಟಿಟಿಟ್ಯೂಟ್ ಆಫ್ ಮೇನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿ ಅಭಿಶು ರಕ್ಷಿತ್ ಮೊದಲ ಸ್ಥಾನ ಪಡೆದರೆ, ಹೈದರಾಬಾದ್‌ನ ಐಬಿಎಸ್ ಕಾಲೇಜು ವಿದ್ಯಾರ್ಥಿ ಯತಾರ್ಥ ಶರ್ಮ 2ನೇ ಸ್ಥಾನ ಮತ್ತು ಚೆನ್ನೈನ ಕ್ರೈಸ್ಟ್ ವಿವಿ ಮೇನೇಜ್‌ಮೆಂಟ್ ವಿದ್ಯಾರ್ಥಿ ಧನ್ಯ ಮ್ಯಾಥಿವ್ 3ನೇ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT