ಉಡುಪಿ: ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಅಂಗವಾಗಿ ಉಡುಪಿ ಜೋಡುಕಟ್ಟೆಯಿಂದ ನಗರದ ಸರ್ವಿಸ್ ಬಸ್ನಿಲ್ದಾಣದವರೆಗೆ ವಿವಿಧ ಕಾರ್ಮಿಕರ ಸಂಘಟನೆಗಳ ಕಾಯಕರ್ತರು ಸೋಮವಾರ ಮೆರವಣಿಗೆ ನಡೆಸಿದರು.
ನಗರದ ಕ್ಲಾಕ್ ಟವರ್ ಬಳಿ ಎಲ್ಲ ಸಂಘಟನೆಗಳ ಸದಸ್ಯರು ಸೇರಿ ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಬೇಡಿಕೆಗಳನ್ನು ಮುಂದಿಟ್ಟರು.
ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ಜಾಗತಿಕ ಮಟ್ಟದಲ್ಲಿ ದುಡಿಯುವ ಜನರ ಶೋಷಣೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಇಂತಹ ರ್ಯಾಲಿ ಅಗತ್ಯ~ ಎಂದು ಸಂಘಟನೆ ಮುಖಂಡರು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಸಿಐಟಿಯು ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿ, `ಜಾಗತೀಕರಣದ ನೀತಿಯಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಿದೆ. ಬಹುತೇಕ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಬದುಕು ಕನಸಾಗಿದ್ದು, ಪಿಂಚಣಿಕೂಡ ದೊರೆಯುತ್ತಿಲ್ಲ~ ಎಂದು ವಿಷಾದಿಸಿದರು.
`ಕಾರ್ಮಿಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯ ಸರಿಯಾಗಿ ನಿರ್ವಹಿಸಲು ಅಗತ್ಯದ ವೇತನ ಕೂಡ ದೊರೆಯುತ್ತಿಲ್ಲ. ಕೆಲಸದ ಅಭದ್ರತೆ ಕಾಡುತ್ತಿದೆ. ಕೆಲಸದ ಅವಧಿ ಕಾರ್ಮಿಕರನ್ನು ನುಂಗಿ ಹಾಕುತ್ತಿದೆ~ ಎಂದರು. ಮುಖಂಡರಾದ ಕೆ.ಶಂಕರ್, ಶಶಿಧರ ಗೊಲ್ಲ, ಪುಷ್ಪಾ ಮಲ್ಲಾರ್, ಬಿಲ್ಕೀಸ್ ಬಾನು ಇದ್ದರು.