ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಯ ಭಾಗ್ಯ ಕಾಣದೆ ಸೊರಗುತ್ತಿದೆ ಕಟ್ಟಡ

Last Updated 11 ಜೂನ್ 2011, 7:55 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣದ ಪಕ್ಕದಲ್ಲಿ ರುವ ಗೋಗೇರಿ ಗ್ರಾ.ಪಂ. ವ್ಯಾಪ್ತಿಯ ಆರೋಗ್ಯ ಸಹಾಯಕಿಯರ ಉಪಕೇಂದ್ರಕ್ಕೆ ಉದ್ಘಾಟನೆಯ ಭಾಗ್ಯ ದಕ್ಕಿಲ್ಲ. ಮಹಿಳೆಯರ ಪಾಲಿನ ಸಂಜೀವಿನಿಯಾಗಿ ಕಂಗೊಳಿಸಬೇಕಿದ್ದ, ಬಣ್ಣದಿಂದ ಅಲಂಕೃತವಾದ ಕಟ್ಟಡವು ದಿನೇ ದಿನೇ ಸೊರಗುತ್ತಿದೆ.

ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಹಾಗೂ ಸುಧಾರಣಾ ಯೋಜನೆ ಅಡಿಯಲ್ಲಿ 2008ರಲ್ಲಿ 6ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಗೇರಿ ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ ದೊರೆತಿತ್ತು.

2009ರಲ್ಲಿ ಕಟ್ಟಡ ಕೆಲಸ ಪೂರ್ಣಗೊಂಡು ಜನರ ಆರೋಗ್ಯ ಸೇವೆಗೆ ಸಿದ್ಧವಾಯಿತು. ಆದರೆ, ಗ್ರಾಮಸ್ಥರ ದುರ್ದೈವ ಎನ್ನುವಂತೆ ವರ್ಷಗಳು ಕಳೆದರೂ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಲಭಿಸಿಲ್ಲ. ಈ ಉಪಕೇಂದ್ರ ಜನರ ಆರೋಗ್ಯ ಸೇವೆಯಿಂದ ದೂರವೇ ಉಳಿದಿದೆ.

ಅಂದಾಜು 10 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಗೋಗೇರಿ ಗ್ರಾ.ಪಂ. ವ್ಯಾಪ್ತಿಯ ನಾಲ್ಕು ಗ್ರಾಮ ಗಳು ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುತ್ತವೆ. ಜನರು ಆರೋಗ್ಯ ತಪಾಸಣೆಗೆ ನಿಡಗುಂದಿಗೆ ಹೋಗಬೇಕಿದ್ದರೆ 23ಕಿ.ಮೀ. ಪ್ರಯಾಣ ಮಾಡಬೇಕು. ಅದಕ್ಕಾಗಿ 40ರೂಪಾಯಿ ಸಾರಿಗೆ ವೆಚ್ಚ ಭರಿಸ ಬೇಕಿದೆ. ಹೀಗಾಗಿ ಬಹುತೇಕ ಜನರು ನಿಡಗುಂದಿ ಆಸ್ಪತ್ರೆ ಯತ್ತ ಮುಖ ವನ್ನೇ ಮಾಡುವುದಿಲ್ಲ.

ಜನರಿಗೆ ಆಗುತ್ತಿರುವ ತೊಂದರೆ ಯನ್ನು ಕಡಿಮೆಗೊಳಿಸಲು ಸ್ಥಳೀಯ ಮಟ್ಟದಲ್ಲಿ ಮಹಿಳೆಯರಿಗೆ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಉಪಕೇಂದ್ರದ ಆರಂಭಕ್ಕೆ ಚಾಲನೆ ನೀಡಲಾಗಿತ್ತು.

ನಿಗದಿತ ಸಮಯದಲ್ಲಿ ಕೇಂದ್ರದ ಉದ್ಘಾಟನೆಯಾಗಿದ್ದರೆ ಇಷ್ಟೊತ್ತಿಗೆ ಗ್ರಾಮದಲ್ಲಿ ಜನರ ಸೇವೆಗೆಂದು ಒಬ್ಬ ಪುರುಷ ಹಾಗೂ ಒಬ್ಬರು ಮಹಿಳಾ ಸಹಾಯಕರು ಇರುತ್ತಿದ್ದರು. ಆದರೆ, ಕಟ್ಟಡ ಸಿದ್ಧವಾದರೂ ಉಪಕೇಂದ್ರ ಮಾತ್ರ ಆರಂಭವಾಗುತ್ತಲೇ ಇಲ್ಲ.
"
ಕಟ್ಟಡ ಕಾಮಗಾರಿ ಮುಕ್ತಾಯ ವಾಗಿ ವರ್ಷಗಳು ಮುಗಿದರೂ ಉದ್ಘಾಟನೆ ಆಗದ ಕಾರಣ ಕೇಂದ್ರದ ಕಿಟಕಿಗಳಿಗೆ ಜೋಡಿಸ ಲಾದ ಗಾಜು ಗಳು ಕಿಡಿಗೇಡಿಗಳ ಕಲ್ಲೇಟಿಗೆ ಸಿಕ್ಕು ಪುಡಿಪುಡಿ ಯಾಗುತ್ತಿವೆ. ಇನ್ನಷ್ಟು ದಿನ ಹೀಗೆಯೇ ಮುಂದುವರೆದರೆ ಕಟ್ಟಡವು ಮತ್ತಷ್ಟು ಹಾಳಾಗಬಹುದು.

`ಇಲಾಖೆ ದುಡ್ಡು ಖರ್ಚು ಮಾಡಿ ಕಟ್ಟಡವನ್ನು ನಿರ್ಮಿಸಿದೆ. ಆದರೆ, ಉದ್ಘಾಟನೆಗೆ ಮಾತ್ರ ಮೀನ ಮೇಷ ಎಣಿಸುತ್ತಿದೆ. ಸಾಕಷ್ಟು ಸಲ ಆರೋಗ್ಯ ಇಲಾಖೆಗೆ ತಿಳಿಸಿದ್ದರೂ ಬರೀ ಭರವಸೆ ಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಸರ್ಕಾರದ ಉತ್ತಮ ಯೋಜನೆಯೊಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಕ್ಕು ಸೊರಗುವಂತಾಗಿದೆ. ಗೋಗೇರಿ, ಮಾಟರಂಗಿ, ನಾಗರಸ ಕೊಪ್ಪ ಮತ್ತು ನಾಗರಸಕೊಪ್ಪ ತಾಂಡಾದ ಬಡ ಜನತೆ ಈ ಯೋಜನೆಯ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ. ಶೀಘ್ರವೇ ಕೇಂದ್ರ ಉದ್ಘಾಟಿಸಿ ಜನರ ಸೇವೆಗೆ ಅನುಕೂಲ ಕಲ್ಪಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ~ ಎನ್ನುತ್ತಾರೆ ಗ್ರಾಮದ ಯುವಕ ಕೆ.ಎಸ್. ಕೊಡತಗೇರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT