ಮುಂಬೈ(ಪಿಟಿಐ): ಬಡ್ಡಿ ದರ ಏರಿಕೆ ಮಾಡುವ ಮೂಲಕ ‘ಆರ್ಬಿಐ’ನ ಮಾಜಿ ಗವರ್ನರ್ ಸುಬ್ಬರಾವ್ ಅನುಸರಿ ಸಿದ್ದ ಬಿಗಿ ಹಣಕಾಸು ನೀತಿಯನ್ನೇ ರಾಜನ್ ಮುಂದುವರಿಸಿದ್ದಾರೆ ಎಂದು ಉದ್ಯಮ ವಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ಈ ಅನಿರೀಕ್ಷಿತ ಆಘಾತ ಕೈಗಾರಿಕೆ ಬೆಳವಣಿಗೆ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈಗಾಗಲೇ ಉದ್ಯಮ ವಲಯ ಸಾಲದ ಕೊರತೆ ಎದುರಿಸುತ್ತಿದೆ. ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ‘ಸಿಐಐ’ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅಭಿ ಪ್ರಾಯಪಟ್ಟಿದ್ದಾರೆ.
‘ಗರಿಷ್ಠ ಮಟ್ಟದಲ್ಲಿರುವ ಬಡ್ಡಿ ದರವೇ ದೇಶದ ‘ಜಿಡಿಪಿ’ ಪ್ರಗತಿಗೆ ತೊಡಕಾಗಿದೆ. ‘ಆರ್ಬಿಐ’ ಮತ್ತೆ ಬಡ್ಡಿ ದರ ಏರಿಕೆ ಮಾಡಿ ಉದ್ಯಮದ ನಿರೀಕ್ಷೆ ಹುಸಿಗೊಳಿಸಿದೆ’ ಎಂದು ‘ಫಿಕ್ಕಿ’ ಅಧ್ಯಕ್ಷೆ ನೈನಾಲಾಲ್ ಕಿದ್ವಾಯಿ ಪ್ರತಿಕ್ರಿಯಿಸಿದ್ದಾರೆ.
‘ದೇಶದ ಹಣಕಾಸು ಮಾರುಕಟ್ಟೆ ರಾಜನ್ ಅವರಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಈ ಎಲ್ಲ ನಿರೀಕ್ಷೆಗಳಿಗೆ ಆಘಾತ ಉಂಟು ಮಾಡುವ ರೀತಿಯಲ್ಲಿ ಅವರು ವರ್ತಿಸಿದ್ದಾರೆ’ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಅಧ್ಯಕ್ಷ ರಾಣಾ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.
‘ಆರ್ಬಿಐ ಉದ್ಯಮ ವಲಯದ ಪ್ರಗತಿಯನ್ನು ಗಣನೆಗೆ ತೆಗೆದುಕೊಳ್ಳದೆ ಬಡ್ಡಿ ದರ ಏರಿಕೆ ಮಾಡಿದೆ. ರಿಯಲ್ ಎಸ್ಟೇಟ್ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ‘ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಒಕ್ಕೂಟ’ (ಕ್ರೆಡಾಯ್) ಅಭಿಪ್ರಾಯಪಟ್ಟಿದೆ.