ಬಾಗಲಕೋಟೆ: ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ಉದ್ಯಮ ಆರಂಭಿಸಿ, ಉದ್ಯೋಗವನ್ನು ಅರಸುವ ಬದಲು ಇತರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಉದ್ಯೋಗ ನೀಡಿ ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಸರ್ಕಾರವು `ಉದ್ಯಮಿಯಾಗು- ಉದ್ಯೋಗ ನೀಡು~ ಎಂಬ ನೂತನ ಅಭಿಯಾನ ಆರಂಭಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬಾಗಲಕೋಟೆ ಸಮೀಪದ ಗದ್ದನಕೇರಿಯಲ್ಲಿ ಸೋಮವಾರ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕಿನ ನೂತನ ಶಾಖೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೂತನ ಅಭಿಯಾನಕ್ಕೆ ಪ್ರಾರಂಭಿಕವಾಗಿ ತುಮಕೂರು, ವಿಜಾಪುರ ಮತ್ತು ಗುಲ್ಬರ್ಗಾ ಜಿಲ್ಲೆಯಲ್ಲಿ ಚಾಲನೆ ನೀಡಿಲಾಗಿದೆ ಎಂದರು.
ಎಂಜಿನಿಯರಿಂಗ್ ಮತ್ತು ಮ್ಯೋನೇಜ್ಮೆಂಟ್ ಕಾಲೇಜು ಗಳಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯಮಿಯಾಗಲು ಇರುವ ಅವಕಾಶಗಳನ್ನು ಪರಿಚಯಿಸಿ, ಸರ್ಕಾರ ಮತ್ತು ಇತರ ಸಂಸ್ಥೆಗಳು ನೀಡುವ ಸಹಾಯ ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲಾ ಗುತ್ತದೆ ಎಂದು ಹೇಳಿದರು.
ಯುವ ಜನರಲ್ಲಿ ಉದ್ಯಮಶೀಲತಾ ಗುಣಗಳನ್ನು ಪ್ರಚೋದಿಸಿ ಅವರು ಸ್ವಂತ ಉದ್ಯಮಗಳನ್ನು ಪ್ರಾರಂಭಿಸು ವಂತೆ ಪ್ರೇರೇಪಿಸುವತ್ತ ವಿಶೇಷ ಗಮನ ಹರಿಸಲಾಗುವುದು ಎಂದರು.
`ಉದ್ಯಮಿಯಾಗು-ಉದ್ಯೋಗ ನೀಡು~ ಅಭಿಯಾನದ ಸದುಪಯೋಗವನ್ನು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಉದ್ಯಮ ಸ್ಥಾಪನೆಗೆ ಅಗತ್ಯ ಭೂಮಿಯನ್ನು ವಿಳಂಬವಿಲ್ಲದೆ ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ ಲ್ಯಾಂಡ್ ಬ್ಯಾಂಕ್ ಮೂಲಕ ಸುಮಾರು 1.15 ಲಕ್ಷ ಎಕರೆ ಭೂಮಿಯನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ ಎಂದರು.
ಲ್ಯಾಂಡ್ ಬ್ಯಾಂಕಿಗೆ ಭೂಮಿಯನ್ನು ಗುರುತಿಸುವಾಗ ಕೃಷಿ ಭೂಮಿಯು ಸೇರದ ಹಾಗೆ ನಿಗಾ ವಹಿಸಲಾಗುತ್ತಿದೆ. ಜೊತೆಗೆ ಭೂಮಿಯನ್ನು ಕಳೆದು ಕೊಳ್ಳುವ ಭೂ-ಮಾಲಿಕರನ್ನು ಯೋಜನೆಯ ಪಾಲುದಾರರನ್ನಾಗಿ ಮಾಡುವ ವಿನೂತನ ಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಉದ್ಯಮಗಳ ಅಭಿವೃದ್ಧಿಗೆ ಅಗತ್ಯವಿರುವ ವಿದ್ಯುತ್ ಸರಬರಾಜಿನ ಸುಧಾರಣೆಗೂ ಯೋಜನೆಗಳನ್ನು ಈಗಾಗಲೇ ಹಾಕಿಕೊಳ್ಳಲಾಗಿದೆ ಎಂದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರ ಫಲವಾಗಿ 67 ಒಡಂಬಡಿಕೆಗಳು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಸಹಿಯಾಗಿದೆ. ಈ ಯೋಜನೆಗಳು ಕಾರ್ಯಗತ ವಾದಾಗ ಸುಮಾರು 17,000 ಮೆಗಾ ವ್ಯಾಟ್ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜೆಟ್ ಬಳಿಕ ಕೂಡಿಗೆ ವಿದ್ಯುತ್ ಸ್ಥಾವರ ಸ್ಥಾಪನೆಗೆ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ಹೇಳಿದರು.
30 ಯೋಜನೆ ಕಾರ್ಯಾರಂಭ: ಪ್ರಥಮ ಜಾಗತಿಕ ಬಂಡ ವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮೋದನೆ ಯಾದ ಯೋಜನೆಗಳಲ್ಲಿ ಸುಮಾರು 30 ಯೋಜನೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಇದಲ್ಲದೆ ಸುಮಾರು 225 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದರು.
ದ್ವಿತೀಯ ಸಮಾವೇಶ: ರಾಜ್ಯಕ್ಕೆ ಇನ್ನಷ್ಟು ಬಂಡವಾಳವನ್ನು ಆಕರ್ಷಿಸುವ ಉದ್ಧೇಶದಿಂದ ದ್ವಿತೀಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜೂನ್ 7 ಮತ್ತು 8 ರಂದು ಆಯೋಜಿಸಿಲು ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯು ತ್ತಿವೆ. ಉದ್ಯಮಿಗಳು ಮತ್ತು ಉದ್ಯಮಶೀಲರು ಈ ಸಮಾವೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.