ಧಾರವಾಡ: ಇಲ್ಲಿನ ಸಾಧನಕೇರಿ ಉದ್ಯಾನವನದ ವೇದಿಕೆಯಲ್ಲಿ ಜರುಗಿದ ಜಿಲ್ಲಾ ಉತ್ಸವದ ಮೊದಲನೆಯ ದಿನದ ಕಾರ್ಯಕ್ರಮದಲ್ಲಿ ಕೆಲಗೇರಿಯ ಚನ್ನಬಸು ಎಚ್.ಮಾಳಗಿ ಪ್ರಸ್ತುತಪಡಿಸಿದ ಶಿಶುನಾಳ ಶರೀಫರ ತತ್ವಪದ, ಅಂಬಾಭವಾನಿ ಭಕ್ತಿ ಗೀತೆಗಳು, ವಚನ ಸಾಹಿತ್ಯ ಕೇಳುಗರ ಮನಸೂರೆಗೊಂಡವು. ಗಣೇಶ ಹಾಸಲಕರ ತಬಲಾ ಸಾಥ್ ನೀಡಿದರು.
ಯಲ್ಲಪ್ಪ ಗೊರ್ಲ ಮತ್ತು ತಂಡದಿಂದ ಕರಡಿ ಮೇಳ, ಬಸಪ್ಪ ಬಾನಿ ಮತ್ತು ತಂಡದಿಂದ ಹೆಜ್ಜೆ ಮೇಳ, ಪ್ರಭು ಕುಂದರಗಿ ಆವರಿಂದ ಜನಪದ ಸಂಗೀತ, ದ್ಯಾವಪ್ಪ ಪೂಜಾರ ಆವರಿಂದ ಡೊಳ್ಳಿನ ಪದ ಮತ್ತು ಭಾಗ್ಯಾ ಗಾಳೆಮ್ಮನವರ ತಂಡದಿಂದ ಸುಗ್ಗಿ ಕುಣಿತ ಕಾರ್ಯಕ್ರಮ ಮೂಡಿಬಂದಿತು. ಪ್ರೇಮಾ ನಡುವಿನಮನಿ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ಸಂಗೊಳ್ಳಿ ರಾಯಣ್ಣ ರೂಪಕ: ಇಲ್ಲಿನ ವೀರರಾಣಿ ಕಿತ್ತೂರ ಚನ್ನಮ್ಮ ಉದ್ಯಾನವನದ ವೇದಿಕೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕುರಿತಾದ ವೀರ ಸಂಗೊಳ್ಳಿ ರಾಯಣ್ಣ ರೂಪಕವನ್ನು ಹೆಬ್ಬಳ್ಳಿಯ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲಾ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.
ಹೊಲ್ತಿಕೋಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಸ್ತುತ ಪಡಿಸಿದ ‘ಜಿಂಕೆ’ ನಾಟಕ ಮತ್ತು ವಿವಿಧ ಶಾಲೆಗಳ ಅಂಗವಿಕಲ ಮಕ್ಕಳಿಂದ ನೃತ್ಯ ಮತ್ತು ಪ್ರತಿಭಾ ಪ್ರದರ್ಶನ ಗಮನ ಸೆಳೆಯಿತು. ಲಕ್ಷ್ಮೀ ಪಾಂಡುರಂಗಿ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ಸಂಜೆ
ಹೊರಗೆ ತಣ್ಣನೆಯ ಚಳಿ ಮೈಗೆ ಅಪ್ಪಳಿಸುತ್ತಿದ್ದರೆ ಸಭಾಭವನದ ಒಳಗೆ ಕಲಾವಿದರ ಸಂಗೀತದ ಮಾಧುರ್ಯ ಪ್ರೇಕ್ಷ್ಷಕರ ಮನಮುಟ್ಟುತ್ತಿತ್ತು.
ಯುವ ಕಲಾವಿದೆ ಶ್ರುತಿ ಭಟ್ ಅವರ ಮುಲ್ತಾನಿ ರಾಗದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನೇಕೆ ಹಿರಿ-ಕಿರಿಯ ಕಲಾವಿದರು ಸಂಗೀತದ ರಸದೌತಣ ನೀಡಿದರು. ಭಟ್ ಅವರ ಅಲಾಪ ಮತ್ತು ಮರಾಠಿ ಅಭಂಗ ಥೈ ಥೈ ಥಾಥೈಥ್ಯ ನಾಚೆಬೋಲ ಮನಸೂರೆಗೊಂಡವು.
ಡಾ.ಗಂಗೂಬಾಯಿ ಗುರುಕುಲ ಸಂಗೀತ ಶಾಲೆಯ ಶಿಕ್ಷಕಿ ಪಲ್ಲವಿ ಖಾನಪೇಟ್ ಗಾಯನ, ಗ್ವಾಲಿಯರ್ ಘರಾಣೆಯ ರಾಧಿಕಾ ಕಾಖಂಡಕಿ ಅವರ ಲಘು ಶಾಸ್ತ್ರೀಯ ಸಂಗೀತವು ಸಂಗೀತಪ್ರಿಯರ ಮನ ತಣಿಸಿತು. ಪೋಟೊ ಕ್ಯಾಪ್ಷನ್ 13 ಎ ಎಲ್ ಎನ್ 1 ಅಳ್ನಾವರ ಚಿಹ್ನೆ ( ಧಾರವಾಡ ಉತ್ಸವ ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.