ಬೆಂಗಳೂರು: ದುಡಿಯುವ ಕೈಗಳಿಗೆ ಕನಿಷ್ಠ ನೂರು ದಿನಗಳ ಕಾಲ ಉದ್ಯೋಗ ಕಲ್ಪಿಸುವ ಮಹಾತ್ವಾಕಾಂಕ್ಷೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್ಆರ್ಇಜಿ)ಯಡಿ ರಾಜ್ಯ ಸರ್ಕಾರ 2009-10ನೇ ಸಾಲಿಗೆ ಹೋಲಿಸಿದರೆ 2010-11 ರಲ್ಲಿ ಕಡಿಮೆ ಹಣ ವ್ಯಯಿಸಿರುವುದು ಬೆಳಕಿಗೆ ಬಂದಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಯಡಿ 2009-10ರಲ್ಲಿ ಸರಾಸರಿ ರೂ. 13 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ, 2010-11 ರಲ್ಲಿ ಸರಾಸರಿ ರೂ. 9 ಕೋಟಿ ವೆಚ್ಚ ಮಾಡಲಾಗಿದೆ ಎಂದು ಇಂಡಿಯಾ ಗವರ್ನ್ಸ್ ರೀಸರ್ಚ್ ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ದೃಢಪಡಿಸಿವೆ.
ಪಕ್ಷೇತರ ಶಾಸಕರ ಕ್ಷೇತ್ರಗಳಲ್ಲಿ 2010-11ರಲ್ಲಿ ರೂ. 17 ಕೋಟಿ ವ್ಯಯ ಮಾಡಲಾಗಿದೆ. ಇದು ರಾಜ್ಯದ ಸರಾಸರಿಗಿಂತ ಶೇ 89 ರಷ್ಟು ಹೆಚ್ಚಾಗಿದೆ.
ಕಾನೂನಿನ ಪ್ರಕಾರ ನಿರ್ಮಾಣ ಸಾಮಗ್ರಿಗಳ ವೆಚ್ಚ ಒಟ್ಟು ಯೋಜನೆಯ ಶೇ 40 ವೆಚ್ಚವನ್ನು ಮೀರುವಂತಿಲ್ಲ. 2009-10 ರಲ್ಲಿ 56 ಕ್ಷೇತ್ರಗಳು ಈ ವೆಚ್ಚದ ಮಿತಿಯನ್ನು ದಾಟಿದ್ದವು. ಆದರೆ, 2010-11 ರಲ್ಲಿ 85 ಕ್ಷೇತ್ರಗಳು ಈ ಮಿತಿಯನ್ನು ದಾಟಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಸರಾಸರಿ ವೇತನ 2010-11ರಲ್ಲಿ 108 ಕ್ಷೇತ್ರಗಳಲ್ಲಿ ಇತರ ಕುಟುಂಬಗಳ ಸರಾಸರಿ ವೇತನಕ್ಕಿಂತ ಕಡಿಮೆಯಾಗಿತ್ತು. ಇದನ್ನು 2009-10 ರ ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ಇಂಡಿಯಾ ಗವರ್ನ್ಸ್ ರಿಸರ್ಚ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ವೀಣಾ ರಾಮಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.