ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ನಡೆಯುತ್ತಿರುವ ಅವ್ಯವಹಾರ ತಡೆಗೆ ಜಿಪಿಎಸ್ ಆಧಾರಿತ ತಂತ್ರಜ್ಞಾನದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2 ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಕೈಬರಹದ ಮೂಲಕ ರಸೀದಿ ಪಾವತಿ ಮಾಡುವ ಕ್ರಮಕ್ಕೆ ಅಂತ್ಯ ಹಾಡಲಿದೆ.
ಇಲಾಖೆಯು ಈ ಯೋಜನೆಯಡಿ ಶೀಘ್ರದಲ್ಲೇ ಗ್ರಾ.ಪಂ. ಹಂತದಲ್ಲಿ ಎರಡು ಸಾವಿರ ಎಂಜಿನಿಯರ್ಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಮೊಬೈಲ್ ದೂರವಾಣಿ ವಿತರಿಸಲಿದೆ ಎಂದು ನರೇಗಾ ನಿರ್ದೇಶಕ ಮನೀಶ್ ಮೌದ್ಗಿಲ್ ತಿಳಿಸಿದರು.
ನರೇಗಾ ಅಡಿ ನಡೆಯುವ ಕಾಮಗಾರಿಗಳ ಛಾಯಾಚಿತ್ರಗಳನ್ನು ಎಂಜಿನಿಯರ್ಗಳು ಸೆರೆಹಿಡಿಯುತ್ತಾರೆ. ಅದನ್ನು ಕಂಪ್ಯೂಟರ್ ಸರ್ವರ್ಗೆ ರವಾನಿಸುತ್ತಾರೆ. ವಿವರಗಳನ್ನು ಸರ್ವರ್ನಲ್ಲಿ ಪರಿಶೀಲಿಸಿ ರಸೀದಿ ಸಿದ್ಧಪಡಿಸಲಾಗುತ್ತದೆ. ಪಿಡಿಒ ಡಿಜಿಟಲ್ ಸಹಿ ಬಳಸಿ, ವೇತನ ಪಾವತಿ ಮಾಡಲಾಗುತ್ತದೆ.
ರಸೀದಿ ನೀಡುವ ಕೆಲಸವನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದರೆ, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ, ರಾಜ್ಯದ ಎಲ್ಲ ಗ್ರಾ.ಪಂ. ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದೆ.