ಬೆಂಗಳೂರು: `ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದೆ~ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು.
ನಗರದ ಜೆ.ಪಿ.ನಗರದಲ್ಲಿನ ವಿಇಟಿ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ರಾಜ್ಯ ಸರ್ಕಾರ ಆರಂಭಿಸಿರುವ ಉದ್ಯೋಗ ಮೇಳ ಪರಿಕಲ್ಪನೆಯಿಂದಾಗಿ ಇದುವರೆಗೆ ಸುಮಾರು 2 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ. ಯುವ ಜನರ ಉದ್ಯೋಗ ಕೌಶಲ್ಯ ಹೆಚ್ಚಿಸಲು ರಾಜ್ಯದ ಅನೇಕ ಕಡೆಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದ ಮಾದರಿಯನ್ನು ಅನುಸರಿಸಿ ಇತರೆ ರಾಜ್ಯಗಳೂ ಈಗ ಉದ್ಯೋಗ ಮೇಳಗಳನ್ನು ಆರಂಭಿಸುತ್ತಿವೆ~ ಎಂದರು.
ಸಂಸದ ಅನಂತಕುಮಾರ್ ಮಾತನಾಡಿ, `ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗಾಗಿ ರಾಜ್ಯ ಸರ್ಕಾರ ಆರಂಭಿಸಿದ ಉತ್ತಮ ಕಾರ್ಯ ಉದ್ಯೋಗ ಮೇಳ. ಹೆಚ್ಚು ಹೆಚ್ಚು ಉದ್ಯೋಗ ನೀಡುವಲ್ಲಿಯೂ ದೇಶದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಕರ್ನಾಟಕ ಅತಿ ಹೆಚ್ಚು ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜ್ಯ. ಕರ್ನಾಟಕದ ಅಭಿವೃದ್ಧಿ ಇಂದು ದೇಶಕ್ಕೇ ಮಾದರಿಯಾಗುತ್ತಿದೆ~ ಎಂದರು.
ಉದ್ಯೋಗ ಮೇಳದಲ್ಲಿ ನಗರದ ವಿವಿಧ ಕಡೆಗಳಿಂದ ಸುಮಾರು 3,500 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ವಿವಿಧ ಖಾಸಗಿ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಶಾಸಕ ಬಿ.ಎನ್.ವಿಜಯ್ಕುಮಾರ್, ಮಾಜಿ ಮೇಯರ್ ಎಸ್. ಕೆ.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.