ಹಲಗೂರು: ಕಲಿಕೆಯ ಹಂತದಲ್ಲಿಯೇ ಸ್ಪಷ್ಟ ಗುರಿ, ಸತತ ಪರಿಶ್ರಮ ಇದ್ದರೆ ಕ್ರೀಡಾ ಕ್ಷೇತ್ರದಲ್ಲಿಯೂ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಾಂಶುಪಾಲರಾದ ಪ್ರೊ.ಶ್ರೀಕುಮಾರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಲಗೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕ್ರೀಡಾ ರಂಗದಲ್ಲಿ ಇಂದು ಉತ್ತಮ ಅವಕಾಶಗಳಿವೆ. ಕ್ರೀಡೆ ಮನುಷ್ಯನ ದೇಹ ಸಧೃಡತೆಯ ಜತೆಗೆ ಮಾನಸಿಕ ಬದ್ಧತೆಗೂ ಕಾರಣವಾಗಿದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಫಲ ಖಂಡಿತ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಎಎಸ್ಐ ಚಂದ್ರಶೇಖರಯ್ಯ ಉದ್ಘಾಟಿಸಿದರು. ಭಾರತೀನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಕೆ.ಆರ್.ಲೋಕೇಶ್, ಅಧ್ಯಾಪಕ ಕಾರ್ಯದರ್ಶಿ ಜಗದೀಶ್, ಭಾಸ್ಕರ್, ಸಹಾಯಕ ಪ್ರಾಧ್ಯಾಪಕರಾದ ವಿಶ್ವಾರಾಧ್ಯ ನಾ.ಕೋಟೆ, ತಾಸೀನಾ ಸುಲ್ತಾನ, ವೇದಾವತಿ, ರಶ್ಮಿ, ಸೀಮಾಕೌಶರ್, ವ್ಯವಸ್ಥಾಪಕ ಉಮೇಶ್ಬಾಬು, ಮೂರ್ತಿ, ದೇವರಾಜು, ಶಿವಣ್ಣ, ಸಿದ್ಧಮ್ಮ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.