ಬಾಳೆಹೊನ್ನೂರು: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವಲ್ಲಿ ಶಾಸನಗಳು ಹಾಗೂ ಇತಿಹಾಸ ಸಹಕಾರಿಯಾಗಲಿವೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಸಮೀಪದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನರಸಿಂಹರಾಜಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಶಾಸನಗಳ ಮಹತ್ವದ ಬಗ್ಗೆ ಅರಿತಿರಬೇಕು. ಇದು ಭವಿಷ್ಯದ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಗತಕಾಲದ ಸಂಸ್ಕೃತಿಯನ್ನು ಮೆಲುಕು ಹಾಕಲು ಶಾಸನಗಳು ಸಹಕಾರಿಯಾಗಲಿವೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಕೆ.ಬಸವರಾಜು ಮಾತನಾಡಿ, ಹಲ್ಮಿಡಿ ಕಾಲದ ಪ್ರಥಮ ಶಾಸನ ಜಿಲ್ಲೆಯಲ್ಲೇ ದೊರಕಿದ್ದು, ಇಂತಹ ಸಾವಿರಾರು ಶಾಸನಗಳು ಭೂಮಿಯಲ್ಲಿ ಭೂಗತ ವಾಗಿದ್ದು, ಜೀರ್ಣೋದ್ಧಾರ ಹಾಗೂ ಉತ್ಕನದ ಸಮಯದಲ್ಲಿ ಅವು ದೊರಕುತ್ತಿವೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎಸ್. ಜಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿ ದಾನಿಗಳಾದ ಸುಬ್ಬಣ್ಣ ನಾಡಿಗ್, ಬಾಳೆಹೊನ್ನೂರು ಹೋಬಳಿ ಕಸಾಪ ಅಧ್ಯಕ್ಷ ರಾ.ವೆಂಕಟೇಶ್, ಕಸಬಾ ಹೋಬಳಿ ಅಧ್ಯಕ್ಷ ಪಿ.ಸಿ.ಮ್ಯಾಥ್ಯೂ, ರಾಮಸ್ವಾಮಿ, ಸಂಧ್ಯಾ, ಬಿ.ಆರ್.ಭದ್ರೇಗೌಡ, ಮಲ್ಲಿ ಕಾರ್ಜುನ ಮುಕಾರ್ತಿಹಾಳ್, ಚಕ್ರಪಾಣಿ ಮತ್ತಿತರರು ಇದ್ದರು.