ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದ್ವಿತೀಯ ಪಿಯುಸಿಯಲ್ಲಿ ಶೇ 70ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ `ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ~ ನೀಡಲಾಗುತ್ತಿದ್ದು, ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ.

ಮೂರು ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದ್ದರೂ ಕರ್ನಾಟಕದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಇದರ ಲಾಭ ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ಅಂಕಿಅಂಶಗಳು ತಿಳಿಸುತ್ತವೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ದ್ವಿತೀಯ ಪಿಯುಸಿಯಲ್ಲಿ ಶೇ 70ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ `ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ~ ನೀಡಲಾಗುತ್ತಿದ್ದು, ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ 2008ರಲ್ಲಿ ಈ ಯೋಜನೆಯನ್ನು ರೂಪಿಸಿದ್ದು, ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಬಹಳಷ್ಟು ಅನುಕೂಲವಾಗಿದೆ.

ಪ್ರತಿ ವರ್ಷ ರಾಜ್ಯದ 4237 ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ದ್ವಿತೀಯ ಪಿಯುಸಿಯಲ್ಲಿ ಶೇ 70ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪದವಿ/ಉನ್ನತ ಶಿಕ್ಷಣ ವ್ಯಾಸಂಗ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಷರತ್ತಿಗೆ ಒಳಪಟ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಬಿ.ಎ., ಬಿ.ಕಾಂ., ಬಿಎಸ್ಸಿ., ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಪಶುವೈದ್ಯಕೀಯ, ಕೃಷಿ ಸೇರಿದಂತೆ ಯಾವುದೇ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಐಟಿಐ, ಡಿಪ್ಲೊಮಾ, ಡಿಇಡಿ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರಲ್ಲ. ಕನಿಷ್ಠ ಮೂರು ವರ್ಷದ ಪದವಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.

ಮೂರು ವರ್ಷಗಳ ಹಿಂದೆಯೇ ಈ ಯೋಜನೆ ಜಾರಿಗೆ ಬಂದಿದ್ದರೂ ಇನ್ನೂ ಜನಪ್ರಿಯವಾಗಿಲ್ಲ ಎಂಬುದಕ್ಕೆ ಮೂರು ವರ್ಷಗಳಿಂದ ಕರ್ನಾಟಕದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಇದರ ಲಾಭ ಪಡೆದುಕೊಳ್ಳದೆ ಇರುವುದೇ ಸಾಕ್ಷಿ.

2008ರಲ್ಲಿ 3794, 2009ರಲ್ಲಿ 3564 ಹಾಗೂ 2010ರಲ್ಲಿ ಸುಮಾರು 3312 ವಿದ್ಯಾರ್ಥಿಗಳು ಮಾತ್ರ ಇದರ ಸದುಪಯೋಗ ಪಡೆದಿದ್ದಾರೆ.

ಅಕ್ಟೋಬರ್ 25ರವರೆಗೆ ಸಮಯ
2011ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಈಗ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಕ್ಟೋಬರ್ 25ರವರೆಗೂ ಸಂಬಂಧಪಟ್ಟ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಲು ಆಗದೆ ಇದ್ದರೆ  ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಗೆ ಹೋಗಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆದರೆ ಇದಕ್ಕೂ ಮುನ್ನ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಬ್ಯಾಂಕಿನ ಮ್ಯಾನೇಜರ್ ಅವರಿಂದ ದೃಢೀಕರಿಸಿರಬೇಕು.

ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಭರ್ತಿ ಮಾಡುವ ವಿಧಾನ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ನೀಡಲಾಗಿದೆ. ಸೂಚನೆಗಳನ್ನು ಸರಿಯಾಗಿ ಓದಿ, ನಂತರ ಭರ್ತಿ ಮಾಡಿದರೆ ತಪ್ಪುಗಳು ಆಗುವ ಸಾಧ್ಯತೆಗಳು ಇರುವುದಿಲ್ಲ .

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿ ವರ್ಷಕ್ಕೆ 10 ಸಾವಿರ ರೂಪಾಯಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿ ನೀಡಲಾಗುತ್ತದೆ.

ಪ್ರತಿವರ್ಷ ವಿದ್ಯಾರ್ಥಿ ವೇತನವನ್ನು ನವೀಕರಿಸುವ ಪದ್ಧತಿ ಇದ್ದು, ಆಯಾ ವರ್ಷ ಶೇ 60ರಷ್ಟು ಅಂಕಗಳನ್ನು ಪಡೆಯುವುದಲ್ಲದೆ, ಶೇ 75ರಷ್ಟು ಹಾಜರಾತಿಯನ್ನು ಹೊಂದಿರಬೇಕು. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ನವೀಕರಿಸಲಾಗುತ್ತದೆ.

ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪೋಷಕರ ಇಲ್ಲವೆ ತಂದೆ- ತಾಯಿ ಖಾತೆಗೆ ಜಮಾ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ವಿದ್ಯಾರ್ಥಿಯು ಎಸ್‌ಬಿಐ, ಎಸ್‌ಬಿಎಂ, ಎಸ್‌ಬಿಎಚ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕು.

2011-12ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾಗಿರುವ ಕಾಲೇಜಿನ ಪ್ರಾಂಶುಪಾಲರಿಂದ ಸಹಿ ಮತ್ತು ಮೊಹರಿನ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಬೇಕು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಂದ ಸಹಿ ಮಾಡಿಸಬಾರದು.

ಪರಿಶಿಷ್ಟ ಜಾತಿ. ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅಂಗವಿಕಲರು ಸಂಬಂಧಿಸಿದ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ವರಮಾನ  ರೂ. 4.50 ಲಕ್ಷ (ಕೇಂದ್ರ ಸರ್ಕಾರದ ನಿಯಮದಂತೆ) ಮೀರಬಾರದು. ಆದಾಯ ಪ್ರಮಾಣ ಪತ್ರ ಸಲ್ಲಿಸುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ.

ಆದಾಯ ಪ್ರಮಾಣ ಪತ್ರ ಇಲ್ಲದೆ ಇದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಬಹುದು.

ಆದರೆ ಕಲಾ ವಿಭಾಗದಲ್ಲಿ ಸಾಕಷ್ಟು ಅರ್ಜಿಗಳು ಬರುತ್ತಿಲ್ಲ. ಇದರಿಂದಾಗಿ ಈ ವರ್ಷ ಕಲಾ ವಿಭಾಗದಲ್ಲಿ ಶೇ 70ಕ್ಕಿಂತ (ಕಳೆದ ವರ್ಷ ಶೇ 80ರಷ್ಟು ಅಂಕ ನಿಗದಿಪಡಿಸಲಾಗಿತ್ತು) ಹೆಚ್ಚು ಅಂಕ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಗಳಿಸಿರಬೇಕಾದ ಅಂಕಗಳ ಪ್ರಮಾಣ ಜಾಸ್ತಿ ಇದ್ದು, ಪಟ್ಟಿಯಲ್ಲಿ ವಿವರಗಳನ್ನು ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಸೂಚನೆಗಳು....
ಬ್ಯಾಂಕ್ ಖಾತೆಯು 11ರಿಂದ 16 ಸಂಖ್ಯೆಗಳನ್ನು ಹೊಂದಿರಬೇಕು.

ಬ್ಯಾಂಕ್ ಹೆಸರು, ಶಾಖೆ, ಶಾಖೆಯ ಕೋಡ್, ಐಎಫ್‌ಎಸ್‌ಸಿ ಕೋಡ್ (11 ಡಿಜಿಟ್) ಇತ್ಯಾದಿಗಳನ್ನು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ದೃಢಪಡಿಸಿಕೊಂಡು ತುಂಬಬೇಕು. ಅಂಕಿ ಸಂಖ್ಯೆಗಳು ವ್ಯತ್ಯಾಸವಾದರೆ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿದ ನಂತರ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ಮೂಲಕ ನಿಗದಿತ ಸ್ಥಳದಲ್ಲಿ ಸಹಿ, ಮೊಹರು ಮಾಡಿಸಬೇಕು.

ಬೇರೆ ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಸಹಿ ಮಾಡಬೇಕು.

ಅರ್ಜಿಯಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ವಿವರವಾಗಿ ನೀಡಬೇಕು.

ದಾಖಲೆಗಳು ಅಪೂರ್ಣವಾಗಿದ್ದರೆ ಅರ್ಜಿಯನ್ನು ತಿರಸ್ಕೃರಿಸಲಾಗುತ್ತದೆ.

ಸೂಚನೆಗಳನ್ನು ಓದಿ ಅರ್ಥ ಮಾಡಿಕೊಂಡ ನಂತರ ಅರ್ಜಿಯನ್ನು ಭರ್ತಿ ಮಾಡುವುದು.

ಭಾವಚಿತ್ರ ಅಂಟಿಸುವುದರ ಜೊತೆಗೆ ಎಲ್ಲ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್‌ಸೈಟ್ ವಿಳಾಸ: www.puc.kar.nic.in

ಕಚೇರಿ ವಿಳಾಸ: ಲೆಕ್ಕಪತ್ರಾಧಿಕಾರಿ, ಪದವಿಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-12
ದೂರವಾಣಿ
: 080-23361856/857/858

ಪಿಯುಸಿಯಲ್ಲಿ ಒಟ್ಟು 600 ಅಂಕಗಳಿಗೆ ಸಂಯೋಜನೆ, ಪ್ರವರ್ಗವಾರು ವಿದ್ಯಾರ್ಥಿಗಳು ಗಳಿಸಿರಬೇಕಾದ ಕನಿಷ್ಠ ಅಂಕಗಳ ವಿವರ
ಪ್ರವರ್ಗ             ವಿಜ್ಞಾನ                        ವಾಣಿಜ್ಯ                        ಕಲೆ
ಬಾಲಕರು    ಬಾಲಕಿಯರು    ಬಾಲಕರು    ಬಾಲಕಿಯರು    ಬಾಲಕರು    ಬಾಲಕಿಯರು
ಎಸ್‌ಸಿ    474    474    445    445    423    423
ಎಸ್‌ಟಿ    474    474    445    445    423    423
ಒಬಿಸಿ    508    508    466    466    423    423
ಜಿಎಂ    508    508    466    466    423    423





 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT