ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆ ಬಯಸಿ ಶ್ರೀರಂಗಪಟ್ಟಣದ ಕೆ. ಬಲರಾಮ ಎಂಬುವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಉಮೇದುವಾರಿಕೆ ಸಲ್ಲಿಸಲು ಆ. 3 ಕೊನೆಯ ದಿನವಾಗಿದೆ. ಈವರೆವಿಗೂ ಸಲ್ಲಿಕೆ ಆಗಿರುವ ಏಕೈಕ ನಾಮಪತ್ರವು ಅವರದಾಗಿದೆ.
ಆಯುಧ ಒಪ್ಪಿಸಲು ಸೂಚನೆ :ಸಾರ್ವಜನಿಕರು ಆಯುಧಗಳನ್ನು ಹೊಂದಿದ್ದರೆ, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಆ. 27ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಅಬಕಾರಿ ದಾಳಿ: 6 ಮೊಕದ್ದಮೆ ದಾಖಲು: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ದಾಳಿ ನಡೆಸಿರುವ ಅಬಕಾರಿ ಪೊಲೀಸ್ ಅಧಿಕಾರಿಗಳು ಜು. 31ಕ್ಕೆ ಕೊನೆಗೊಂಡಂತೆ ಒಟ್ಟು ಆರು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ 1 ಘೋರ, 1 ಸಾಮಾನ್ಯ ಹಾಗೂ 4 ಮೊಕದ್ದಮೆಗಳನ್ನು 15(ಎ)ರಡಿ ದಾಖಲಿಸಲಾಗಿದೆ.
ದಾಳಿ ಸಂದರ್ಭದಲ್ಲಿ 15.88 ಲೀ ಅಕ್ರಮ ಮದ್ಯ ಹಾಗೂ 6.88 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಅರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಹೆಚ್.ಎನ್.ಆನಂದ್ ತಿಳಿಸಿದ್ದಾರೆ.