ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ.ಮಜಗೆ ಅವರು ಬುಧವಾರ ಕೃಷ್ಣರಾಜಪುರ ತಾಲ್ಲೂಕಿನ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಧ್ಯಾಹ್ನ ಯಾವುದೇ ಪೂರ್ವಸೂಚನೆ ಇಲ್ಲದೆ ಕೃಷ್ಣರಾಜಪುರ ಉಪ ನೋಂದಣಿ ಕಚೇರಿಗೆ ತೆರಳಿದ ಉಪ ಲೋಕಾಯುಕ್ತರು, ಅಲ್ಲಿನ ಕಡತಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ದಾಖಲೆಗಳು ಮತ್ತು ಕಡತಗಳ ನಿರ್ವಹಣೆ ಅಸಮರ್ಪಕವಾಗಿದ್ದುದನ್ನು ಗುರುತಿಸಿದ ನ್ಯಾ.ಮಜಗೆ, ಅಲ್ಲಿನ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನೋಂದಣಿ ಕಚೇರಿಯ ಖಜಾನೆಗೂ ಭೇಟಿ ನೀಡಿದ ಅವರು, ಹಣಕಾಸು ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ನೋಂದಣಿ ಪ್ರಕ್ರಿಯೆ, ಅಲ್ಲಿನ ನಿಯಮಗಳು ಮತ್ತಿತರ ವಿಷಯಗಳ ಬಗ್ಗೆ ಅವರು ಅಧಿಕಾರಿಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ಪಡೆದರು.
ನೆಮ್ಮದಿ ಕೇಂದ್ರ, ತಾಲ್ಲೂಕು ಕಚೇರಿಗಳಿಗೂ ಭೇಟಿ ನೀಡಿದ ಉಪ ಲೋಕಾಯುಕ್ತರು, ಪರಿಶೀಲನೆ ನಡೆಸಿದರು. ಈ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಸಾರ್ವಜನಿಕರ ಅಹವಾಲು ಆಲಿಸಿದರು. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷ್ಣರಾಜಪುರ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಿರುವ ಸಂತೆ ಮೈದಾನದ ದುರವಸ್ಥೆಯನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಆರ್.ಗುರುರಾಜನ್ ಭೇಟಿ: ಮತ್ತೊಬ್ಬ ಉಪ ಲೋಕಾಯುಕ್ತ ನ್ಯಾಯಮೂರ್ತಿ ಆರ್.ಗುರುರಾಜನ್ ಅವರು ಬುಧವಾರ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿದರು. ಎರಡೂ ತಾಲ್ಲೂಕುಗಳಲ್ಲಿ ವಿವಿಧ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಅವರು, ಸಾರ್ವಜನಿಕರ ಅಹವಾಲು ಆಲಿಸಿದರು.