ಮಂಡ್ಯ: ತಾಲ್ಲೂಕು ದುದ್ದ ಹೋಬಳಿಯ ತಿಬ್ಬನಹಳ್ಳಿಯ ಬಳಿ ವಿ.ಸಿ.ನಾಲೆಯ ಒಂದನೇ ಉಪ ನಾಲೆಯ ಬಳಿ ಗೇಟು ಮುರಿದ ಕಾರಣ ಅಧಿಕ ಪ್ರಮಾಣದಲ್ಲಿ ನೀರು ಗದ್ದೆಗಳಿಗೆ ಹರಿದಿದ್ದು, ಕಟಾವಿಗೆ ಬಂದಿದ್ದ ಬತ್ತದ ಫಸಲಿಗೆ ಹಾನಿಯಾಗಿದೆ.
ಹಾನಿಯ ಪ್ರಮಾಣ ತಿಳಿದುಬಂದಿಲ್ಲ. ಅಂದಾಜು 5-6 ಎಕರೆ ಭೂಮಿಗೆ ನೀರು ಹರಿದಿದೆ. ಮಂಗಳವಾರ ರಾತ್ರಿ ಅವಘಡ ಸಂಭವಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಜಾಗೃತರಾದ ಕೃಷಿಕರು ಗದ್ದೆಗೆ ಧಾವಿಸಿ ಕಟಾವು ಮಾಡಿದ್ದ ಬತ್ತದ ಫಸಲನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಆದರೂ, ಕಟಾವು ಮಾಡಬೇಕಿದ್ದ ಬತ್ತ 3-4 ಎಕರೆ ನೀರಿನಲ್ಲಿ ನೆನೆದಿದ್ದು, ನಷ್ಟದ ಭೀತಿ ಎದುರಾಗಿದೆ.
ನಾಲೆಯ ತೂಬು ಬಿರುಕು ಬಿಟ್ಟಿರುವ ಕುರಿತು ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡ್ದ್ದಿದರೂ ನಿರ್ಲಕ್ಷ್ಯ ವಹಿಸಿದ್ದೇ ಈ ಹಾನಿಗೆ ಕಾರಣ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ರೈತ ಮುಖಂಡರ ಎದುರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.
ರೈತರು ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದು, ಬೆಳೆ ನಷ್ಟ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪುಟ್ಟರಾಜು ಭರವಸೆ ನೀಡಿದರು.