ತುಮಕೂರು: ಗುಣಾತ್ಮಕ ಶಿಕ್ಷಣ ನೀಡುವ ದೃಷ್ಟಿಯಿಂದ ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆ ನೇಮಕಾತಿಗೆ ಬಿಇಡಿ ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾ ಬಿಇಡಿ ಪದವೀಧರರ ವಿಚಾರ ವೇದಿಕೆ ಒತ್ತಾಯಿಸಿದೆ.
ಬಿಇಡಿ ಪೂರೈಸಿದ ಸಾವಿರಾರು ಪದವಿಧರರು ಈಗಾಗಲೇ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.
ಇಂತಹ ಸಾವಿರಾರು ಪದವಿಧರರು ಖಾಲಿ ಇರುವ ಹುದ್ದೆಗೆ ಅರ್ಹರಾಗಿದ್ದಾರೆ. ಇದನ್ನು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಗಮನಿಸಿ ಸೂಕ್ತ ಕ್ರಮ ಅನುಸರಿಸಬೇಕು ಎಂದು ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.
ಸರ್ಕಾರ ಕೇವಲ ವೈಯಕ್ತಿಕ ಹಿತದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ. ಅದೇ ರೀತಿ ನೇಮಕಾತಿ ಮಾಡಿಕೊಂಡು ನಂತರ ಬಿಇಡಿ ಪೂರೈಸಲು 4 ವರ್ಷ ಸಮಯ ನೀಡುವುದು ಸಹ ಸರಿಯಾದ ಕ್ರಮವಲ್ಲ ಎಂದು ವೇದಿಕೆ ಟೀಕಿಸಿದೆ.
ನೇಮಕಾತಿ ನಂತರ ಪದವಿ ಪಡೆಯಲು ಅವಕಾಶ ನೀಡಬಾರದು. ಇದರಿಂದಾಗಿ ಉದ್ಯೋಗಕ್ಕಾಗಿ ಪ್ರಮಾಣ ಪತ್ರ ಪಡೆದಂತಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಎಂ.ಬಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ನಟರಾಜು ತಿಳಿಸಿದ್ದಾರೆ.