ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮೂವರು ಉಪನ್ಯಾಸಕರು ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆ ಮುಖಂಡರು ಸೋಮವಾರ ಕಾಲೇಜು ಪ್ರಭಾರಿ ಪ್ರಾಂಶುಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.
ತರಗತಿಗಳಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದನ್ನೆ ಕೆಲವು ಉಪನ್ಯಾಸಕರು ಹವ್ಯಾಸ ಮಾಡಿಕೊಂಡಿದ್ದಾರೆ. ಸಣ್ಣಪುಟ್ಟ ಕಾರಣಗಳಿಗಾಗಿ ವಿದ್ಯಾರ್ಥಿನಿಯರು ನಿಂದನೆಗೆ ಗುರಿಯಾಗುತ್ತಿದ್ದಾರೆ. ಉಪನ್ಯಾಸಕರ ದೌರ್ಜನ್ಯದಿಂದ ಹಲವಾರು ವಿದ್ಯಾರ್ಥಿನಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ರೈತ ಮುಖಂಡ ವಡಗೂರು ನಾಗರಾಜ್ ಆರೋಪಿಸಿದರು.
ಕಾಲೇಜು ಉಪನ್ಯಾಸಕರ ಪೈಕಿ ಮೂವರು, ವಿದ್ಯಾರ್ಥಿನಿಯರ ಜೊತೆ ತುಂಬಾ ಒರಟಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಶಾಲಾಭಿವೃದ್ಧಿ ಸಮಿತಿಯ ಕೃಷ್ಣಮೂರ್ತಿ ಒತ್ತಾಯಿಸಿದರು.
ಕೆಲವು ಉಪನ್ಯಾಸಕರು ಕಾಲೇಜು ಅವಧಿಯಲ್ಲಿ ಸಹ ಖಾಸಗಿ ಟ್ಯೂಷನ್ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಹಿತಕ್ಕಿಂತ ಟ್ಯೂಷನ್ ವಿದ್ಯಾರ್ಥಿಗಳ ಮೇಲೆ ಮಮಕಾರ ಹೆಚ್ಚು ಎಂದು ವಿದ್ಯಾರ್ಥಿ ಮುಖಂಡ ಸುರೇಶ್ಗೌಡ ದೂರಿದರು.
ಸಂಘಟನೆಗಳ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಭಾರಿ ಪ್ರಾಂಶುಪಾಲ ಪರಶಿವಮೂರ್ತಿ, ಎಲ್ಲ ದೂರುಗಳನ್ನು ಪ್ರಾಂಶುಪಾಲರ ಗಮನಕ್ಕೆ ತರಲಾಗುವುದು. ಉಪನ್ಯಾಸಕರು ತಪ್ಪು ಮಾಡಿದ್ದರೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.ವಿಜಯಕುಮಾರ್, ವೀರಣ್ಣ, ಪ್ರದೀಪ್, ರಾಜಾರೆಡ್ಡಿ ಹಾಜರಿದ್ದರು.