ನವದೆಹಲಿ (ಪಿಟಿಐ): ಆಗಸ್ಟ್ 7 ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ತಿ ಹಮೀದ್ ಅನ್ಸಾರಿ ಅವರ ವಿರುದ್ಧ ತನ್ನ ಸರ್ವಾನುಮತದ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರನ್ನು ಎನ್ ಡಿ ಎ ಸೋಮವಾರ ಆಯ್ಕೆ ಮಾಡಿತು.
ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಪಾಲ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಸದನವನ್ನು ಸಮರ್ಪಕವಾಗಿ ನಿಭಾಯಿಸದ ಅನ್ಸಾರಿ ಅವರನ್ನು ಮರುನಾಮಕರಣ ಮಾಡುವ ಬಗ್ಗೆ ತನಗೆ ಆಕ್ಷೇಪವಿದೆ ಎಂದು ವಿರೋಧಿ ಮೈತ್ರಿಕೂಟ ಹೇಳಿತು.
~ಅವರಿಗೆ (ಕಾಂಗ್ರೆಸ್ ನೇತೃತ್ವದ ಯುಪಿಎ) ಸುಲಲಿತ ನಡಿಗೆಗೆ ಅವಕಾಶ ನೀಡದಿರಲು ನಾವು ನಿರ್ಧರಿಸಿದ್ದೇವೆ. ನಾವು ಸರ್ವಾನುಮತದಿಂದ ಜಸ್ವಂತ್ ಸಿಂಗ್ ಅವರನ್ನು ಎನ್ ಡಿಎ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದ್ದೇವೆ~ ಎಂದು ಎನ್ ಡಿ ಎ ಕಾರ್ಯಾಧ್ಯಕ್ಷ ಎಲ್. ಕೆ. ಅಡ್ವಾಣಿ ಅವರು ಎನ್ ಡಿಎ ಸಭೆಯ ಬಳಿಕ ಪ್ರಕಟಿಸಿದರು.
ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಮಸೂದೆಯನ್ನು ವಿರೋಧಿಸಿದವರನ್ನು ಉಚ್ಚಾಟಿಸಲು ಮಾರ್ಶಲ್ ಗಳನ್ನು ಬಳಸಿದ ಜೆಡಿ(ಯು) ಮುಖ್ಯಸ್ಥ ಶರದ್ ಯಾದವ್ ಅವರು ತೀವ್ರ ಕಳವಳ ವ್ಯಕ್ತ ಪಡಿಸಿದರು ಎಂದು ಅಡ್ವಾಣಿ ನುಡಿದರು.
ಅನ್ಸಾರಿ ಅವರ ಅಭ್ಯರ್ಥನವನ್ನು ಬೆಂಬಲಿಸುವಂತೆ ಕೋರಲು ಶನಿವಾರ ತಮ್ಮನ್ನು ಕರೆಸಿಕೊಂಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿಯೂ ಇದೇ ಕಳವಳವನ್ನು ಹಂಚಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮೊದಲಿಗೆ ಎನ್ ಡಿಎ ಸಂಚಾಲಕರೂ ಆಗಿರುವ ಶರದ್ ಯಾದವ್ ಅವರನ್ನೇ ಕೋರಿಕೊಳ್ಳಲಾಯಿತು. ಆದರೆ ತಾವು ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಹೊಂದಿರುವುದನ್ನು ಉಲ್ಲೇಖಿಸಿ ಅವರು ನಿರಾಕರಿಸಿದರು ಎಂದು ಅಡ್ವಾಣಿ ಹೇಳಿದರು.