ಡೆಹ್ರಾಡೂನ್ (ಐಎಎನ್ಎಸ್): ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಬಾಬಾ ರಾಮದೇವ್ ಅವರು ಹರಿದ್ವಾರದ ಪತಂಜಲಿ ಯೋಗ ಆಶ್ರಮದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಭಾನುವಾರ ಹಣ್ಣಿನರಸ ಸೇವಿಸುವುದರ ಮೂಲಕ ಮುಕ್ತಾಯಗೊಳಿಸಿದರು.
~ಪ್ರಸ್ತುತ ರಾಮದೇವ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇದೀಗ ಅವರು ಸತ್ಯಾಗ್ರಹವನ್ನು ಕೈಬಿಟ್ಟಿರುತ್ತಾರೆ. ಆದರೆ, ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಅವರು ಹಮ್ಮಿಕೊಂಡಿದ್ದ ಚಳುವಳಿಯು ಮುಂದುವರೆಯಲಿದೆ~ ಎನ್ನುತ್ತಾರೆ ಅವರ ಆಪ್ತ ಆಚಾರ್ಯ ಬಾಲಕೃಷ್ಣ.
~ಧಾರ್ಮಿಕ ಹಾಗೂ ಅಧ್ಯಾತ್ಮಿಕ ಮುಖಂಡರ ಮನವಿಯ ಮೇರೆಗೆ ಇಂದು ನಾನು ಉಪವಾಸ ಸತ್ಯಾಗ್ರಹ ನಿಲ್ಲಿಸಿರುತ್ತೇನೆ. ಆದರೆ, ಈ ರೀತಿಯ ಸತ್ಯಾಗ್ರಹವನ್ನು ನನ್ನ ಕೊನೆಯ ಉಸಿರಿರುವವರೆಗೆ ಮುಂದುವರೆಸುತ್ತೇನೆ. ಆಪ್ತರಾದ ಬಾಲಕೃಷ್ಣ ಅವರು ಕೂಡ ಸತ್ಯಗ್ರಹದಲ್ಲಿ ಭಾಗವಹಿಸಲಿದ್ದಾರೆ~ ಎನ್ನುತ್ತಾರೆ ರಾಮದೇವ್.
ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ರಾಮದೇವ್ ಅವರ ಉಪವಾಸ ಸತ್ಯಾಗ್ರಹ ನಿಲ್ಲಿಸುವಲ್ಲಿ ಶ್ರಮಿಸಿದ್ದಾರೆ ಎನ್ನಲಾಗಿದೆ. ಬಾಬಾ ಅವರು ಹಣ್ಣಿನರಸವನ್ನು ಸೇವಿಸುವುದರೊಂದಿಗೆ ಉಪವಾಸ ಕೊನೆಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂಬತ್ತು ದಿನಗಳಿಂದ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಪತಂಜಲಿ ಆಶ್ರಮದಲ್ಲಿ ಉಪವಾಸವನ್ನು ಕೈಗೊಂಡಿದ್ದರು. ಇತ್ತೀಚಿಗೆ ಅವರ ಆರೋಗ್ಯವು ಕ್ಷೀಣಿಸಿದ್ದರಿಂದಾಗಿ ಅವರನ್ನು ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.