ಇಲ್ಲಿನ ಪ್ರಧಾನಮಂತ್ರಿ ನಿವಾಸದಲ್ಲಿ ಸುಮಾರು ಎರಡು ಗಂಟೆಗಿಂತಲೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅಣ್ಣಾ ಹಜಾರೆ ಅವರ ಆರೋಗ್ಯದ ಬಗ್ಗೆ ಪ್ರಧಾನಿ ಮನಮೋಹನಸಿಂಗ್ ಅವರು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಲಿಖಿತ ರೂಪದಲ್ಲಿ ಸಮಯ ನಿಗದಿ ಮಾಡಿ ಆಶ್ವಾಸನೆ ನೀಡುವವರೆಗೂ ಅಣ್ಣಾ ಹಜಾರೆ ಅವರು ಉಪವಾಸ ಬಿಟ್ಟು ಕದಲುವುದಿಲ್ಲ ಎಂದು ಅವರ ಸಹಚರರು ತಿಳಿಸಿದ್ದಾರೆ ಎಂದು ಹೇಳಿದ ಪ್ರಧಾನಿ ಪ್ರಬಲ ಹಾಗೂ ಪರಿಣಾಮಕಾರಿ ಲೋಕಪಾಲ ಮಸೂದೆ ತರುವುದಕ್ಕೆ ಒಮ್ಮತದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅಣ್ಣಾ ಹಜಾರೆ ಅವರ ತಂಡವು ಇನ್ನು ನಾಲ್ಕು ದಿವಸಗಳಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದಿಸಬೇಕೆಂದು ಒತ್ತಾಯಿಸುತ್ತಿದೆ. ಹೀಗಾಗಿ ನಾವು ಅಧಿವೇಶನವನ್ನು ಇನ್ನಷ್ಟು ವಿಸ್ತರಿಸಬೇಕು ಇಲ್ಲವೆ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸದೆ ಅನುಮೋದಿಸಬೇಕಾಗುತ್ತದೆ ಎಂದು ಅವರು ನುಡಿದರು.
ಜನಲೋಕಪಾಲ ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕೆಂದು ಸರ್ಕಾರ ಈಗಾಗಲೇ ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿದೆ ಎಂದ ಪ್ರಧಾನಿ, ಮಸೂದೆಯನ್ನು ಶೀಘ್ರ ಮಂಡಿಸಲು ಅನುಮತಿ ನೀಡುವಂತೆ ಸ್ಥಾಯಿಸಮಿತಿಗೂ ಕೇಳಿಕೊಳ್ಳಲಾಗಿದೆ ಎಂದು ವಿವರಿಸಿದರು.