ಮುಜಾಫ್ಫರ್ ನಗರ (ಪಿಟಿಐ): ಕೆರಳಿಸುವಂತಹ ಭಾಷಣಗಳ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ ಆಪಾದನೆಗಳಿಗಾಗಿ ಬಿಎಸ್ ಪಿ ಸಂಸತ್ ಸದಸ್ಯ, ಬಿಜೆಪಿ ಮತ್ತು ಬಿಎಸ್ ಪಿ ಶಾಸಕರು ಹಾಗೂ ಹಲವಾರು ರಾಜಕಾರಣಿಗಳು ಮತ್ತು ಸಮುದಾಯಗಳ ಹಿರಿಯ ನಾಯಕರ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ಬಂಧನ ವಾರಂಟ್ ಜಾರಿಗೊಳಿಸಿದೆ.
ಬಿಎಸ್ ಪಿ ಸಂಸತ್ ಸದಸ್ಯ ಖದೀರ್ ರಾಣಾ, ಬಿಜೆಪಿ ಶಾಸಕರಾದ ಸಂಗೀತ ಸೋಮ್ ಮತ್ತು ಭರತೇಂದು ಸಿಂಗ್, ಬಿಜೆಪಿ ಶಾಸಕರಾದ ನೂರ್ ಸಲೀಂ, ಮೌಲಾನಾ ಜಮೀಲ್, ಕಾಂಗ್ರೆಸ್ ನಾಯಕ ಸಯೀದುಝಮಾನ್ ಮತ್ತು ಬಿಕೆಯು ಮುಖ್ಯಸ್ಥ ನರೇಶ್ ಟಿಕಾಯತ್ ಸೇರಿದಂತೆ 16 ಮಂದಿ ರಾಜಕಾರಣಿಗಳು ಮತ್ತು ಸಮುದಾಯ ನಾಯಕರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ದಿನಗಳಲ್ಲಿ ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ನುಡಿದರು.
'ನಾವು ಮೂರು ಅಥವಾ ನಾಲ್ಕು ಮಂದಿ ರಾಜಕಾರಣಿಗಳನ್ನು ಬಂಧಿಸಿದ್ದೇವೆ. ನಾವು ಕೆಲವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದೇವೆ. ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿದೆ ಮತ್ತು ಆದಷ್ಟು ಬೇಗನೆ ಅವರನ್ನು ಬಂದಿಸಲಾಗುವುದು. ತಪ್ಪಿತಸ್ಥರನ್ನೆಲ್ಲ ಎರಡು ದಿನಗಳಲ್ಲಿ ಬಂಧಿಸಲಾಗುವುದು. ಇದು ತನಿಖೆಯನ್ನು ಅವಲಂಬಿಸಿದೆ' ಎಂದು ಅವರು ಹೇಳಿದರು.