ಲಖನೌ (ಪಿಟಿಐ): ಮುಜಾಫರ್ ನಗರದ ಕೋಮುಗಲಭೆ ಪ್ರಕರಣ ಉತ್ತರ ಪ್ರದೇಶದಲ್ಲಿ ಸೋಮವಾರ ದಿಂದ ಆರಂಭವಾದ ಮುಂಗಾರಿನ ಅಧಿವೇಶನದ ಮೊದಲ ದಿನವೇ ಪ್ರತಿಧ್ವನಿಸಿತು.
ವಿರೋಧಪಕ್ಷದ ಸದಸ್ಯರು ಒಂದಾಗಿ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು.
ಬೆಳಿಗ್ಗೆ 11ಗಂಟೆಗೆ ಆರಂಭವಾದ ಅಧಿವೇಶನದಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಮತ್ತು ರಾಷ್ಟ್ರೀಯ ಲೋಕ ದಳದ ಸದಸ್ಯರು ಮುಜಾಫರ್ ನಗರ ಪ್ರಕರಣದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಸರ್ಕಾರ ನಡೆದುಕೊಂಡ ರೀತಿಯನ್ನು ಖಂಡಿಸಿದರು. ಘೋಷಣಾ ಫಲಕ, ಬ್ಯಾನರ್್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ವಿಎಚ್ಪಿಎಸ್ಪಿ ಕೆ ಪೆಹಲೇ ದಾವತ್, ಕೋಸಿ ಪರಿಕ್ರಮ ಕೆ ಬಾದ್ ಅದಾವತ್’, ‘ಅಪಹರಣ್, ಫಿರೋಟಿ, ಬಲಾತ್ಕಾರ್ ಎಸ್ಪಿ ಕಾ ಜಂಗ್ಲಿರಾಜ್’ ಎಂದು ಬಿಎಸ್ಪಿ ಸದಸ್ಯರು ಘೋಷಣೆ ಕೂಗಿದರು. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರೆ, ‘ಪಂಚಾಯತ್ಗಳು ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಬೇಕು’. ‘ಬಲಾತ್ಕಾರಿಗಳ ಸಂರಕ್ಷಣೆ ಬಂದ್ ಮಾಡಿ’ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ಈ ನಡುವೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮೊಹಮ್ಮದ್ ಅಜಂ ಖಾನ್ ಮಾತನಾಡಿ, ‘ಮುಜಾಫರ್ನಗರದಲ್ಲಿ ತುಂಬಾ ವ್ಯವಸ್ಥಿತವಾಗಿ ಕೋಮು ಗಲಭೆಯನ್ನು ಮಾಡಲಾಗಿದೆ. ಬಿಜೆಪಿ ಗುಪ್ತವಾಗಿ ಎರಡು ಕೋಮಿನ ವಿಭಜನೆ ನಡೆಸಿದೆ’ ಎಂದು ಆರೋಪಿಸಿದರು.
ಸದನದಲ್ಲಿ ಗದ್ದಲ ತಾರಕಕ್ಕೇರಿದಾಗ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ, ಸದಸ್ಯರು ತಮ್ಮ ಸ್ಥಾನಕ್ಕೆ ಹಿಂತಿರುಗಬೇಕು ಎಂದು ಸೂಚಿಸಿದರು. ನಂತರ, ಸದನವನ್ನು ಮುಂದೂಡಿದರು.
ಕರ್ಫ್ಯೂ ಹಿಂದಕ್ಕೆ
ಮುಜಾಫರ್ನಗರ (ಪಿಟಿಐ): ಗಲಭೆಗ್ರಸ್ತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಮುಜಾಫರ್ನಗರದ ಎಲ್ಲ ಭಾಗದಲ್ಲಿ ಹಾಕಲಾಗಿದ್ದ ಕರ್ಫ್ಯೂ ಸೋಮವಾರ ಸಂಜೆಯಿಂದ ಹಿಂದಕ್ಕೆ ಪಡೆಯಲಾಗಿದೆ.
ಕಳೆದ 10 ದಿನಗಳಿಂದ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ನೂರಾರು ಜನರನ್ನು ಬಂಧಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಪ್ರಮುಖರನ್ನು ಸಹ ಬಂಧಿಸುವ ವಿಶ್ವಾಸವನ್ನು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.