‘ಉಮೇಶ್’ ಚಿತ್ರದ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿದೆ. ಸೈಕೋ ಕಿಲ್ಲರ್ ಉಮೇಶ್ ರೆಡ್ಡಿಯ ಬದುಕನ್ನಾಧರಿಸಿದ ಕಥೆ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಕಳೆದ ವಾರ (ಸೆ.6) ಚಿತ್ರ ಬಿಡುಗಡೆ ಆಗಬೇಕಿತ್ತು.
ಆದರೆ ಉಮೇಶ್ ರೆಡ್ಡಿ ಕುಟುಂಬ ನ್ಯಾಯಾಲಯದಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ತಕರಾರು ಸಲ್ಲಿಸಿತ್ತು. ಚಿತ್ರದ ಪೋಸ್ಟರ್ಗಳಲ್ಲಿ ಅಥವಾ ಚಿತ್ರದಲ್ಲಿ ರೆಡ್ಡಿ ಹೆಸರನ್ನು ಬಳಸದಂತೆ ನ್ಯಾಯಾಲಯ ಆದೇಶಿಸಿ, ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಚಿತ್ರ ಇಂದು (ಸೆ.13) ತೆರೆಗೆ ಬರಲಿದೆ.
‘ಉಮೇಶ್’ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರದ ಸಂಭಾಷಣೆ ಸೇರಿದಂತೆ 8 ಕಡೆಗಳಲ್ಲಿ ಕತ್ತರಿ ಪ್ರಯೋಗಕ್ಕೆ ಸೆನ್ಸಾರ್ ಮಂಡಳಿ ಸೂಚಿಸಿತ್ತು ಎಂದು ನಿರ್ದೇಶಕ ಅಶೋಕ್ ಹೇಳಿದರು.
ಪೋಸ್ಟರ್ಗಳಲ್ಲಿನ ವಿಕೃತ ಚಿತ್ರಗಳನ್ನು ಸಮರ್ಥಿಸಿಕೊಂಡ ನಿರ್ದೇಶಕರು, ‘ಇದು ಪ್ರಚಾರ ತಂತ್ರದ ಒಂದು ಭಾಗ’ ಎಂದು ಹೇಳಿದರು. ಸಮಾಜಕ್ಕೆ ಸಂದೇಶ ನೀಡುವ ವಿಷಯ ಇಟ್ಟುಕೊಂಡು ಚಿತ್ರಕಥೆ ರೂಪಿಸಲಾಗಿಲ್ಲ. ಇದು ಬರೀ ಕೌತುಕದ ಕಥೆ ಎನ್ನುವುದು ಅವರ ಸ್ಪಷ್ಟ ಮಾತು. ‘ಉಮೇಶ್ ರೆಡ್ಡಿಯ ಬದುಕಿನ ಘಟನೆಗಳನ್ನು ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರ ನನಗೆ ಸಕಾರಾತ್ಮವಾಗಿ ಕಾಣಿಸುತ್ತಿದೆ’ ಎಂದು ನಿರ್ದೇಶಕರು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ, ನಟಿ ವೈಯಲಾ ಮ್ಯಾಥ್ಯೋಸ್ ಹಾಗೂ ಚಿತ್ರದ ಹಂಚಿಕೆದಾರ ಆರ್.ಎಂ.ಆರ್. ಗೌಡ ಹಾಜರಿದ್ದರು. z