ಹೊನ್ನಾಳಿ: ಹಜರತ್ ಮಾಸೂಮ್ ಪಾಷಾ ಖಾದ್ರಿ ಅವರ ಸಂದಲ್ ಹಾಗೂ ಉರುಸ್ ಪ್ರಯುಕ್ತ ಮುಸ್ಲಿಮರು ಶುಕ್ರವಾರ ಪಟ್ಟಣದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಿದರು. ಹಜರತ್ ಮಾಸೂಮ್ ಪಾಷಾ ಖಾದ್ರಿ ಅವರ ಸಂದಲ್ ಹಾಗೂ ಉರುಸ್ ಆಚರಣೆಗೆ ನೂರಾರು ವರ್ಷಗಳ ಇತಿಹಾಸ ಇದೆ.
ಹಜರತ್ ಮಾಸೂಮ್ ಪಾಷಾ ಖಾದ್ರಿ ಅವರು ನವಾಬರ ಕಾಲದಲ್ಲಿ ಆಗಿ ಹೋದ ಸರ್ವಧರ್ಮದ ಗುರುಗಳು. ಕುದುರೆ ಏರಿ ಸಂಚರಿಸುತ್ತಿದ್ದ ಇವರು ಜನಸಾಮಾನ್ಯರ ಕಷ್ಟ-ಕೋಟಲೆಗಳಿಗೆ ಸ್ಪಂದಿಸುತ್ತಿದ್ದರು. ಭಾವೈಕ್ಯ ಪ್ರತಿಪಾದಿಸುತ್ತಿದ್ದರು. ಅನೇಕ ಪವಾಡಗಳನ್ನು ನಡೆಸುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.
ಶುಕ್ರವಾರ ರಾತ್ರಿ ನಡೆದ ಉರುಸ್ ಆಚರಣೆಯಲ್ಲಿ ದಾವಣಗೆರೆ, ಶಿವಮೊಗ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಮುಸ್ಲಿಂ ಧರ್ಮಗುರುಗಳು ಪ್ರವಚನ ನಡೆಸಿಕೊಟ್ಟರು.
ಧರ್ಮಗುರುಗಳಾದ ಆಖಿಲ್ ರಜ್ವಿ, ಮಹಮ್ಮದ್ ಅಯಾತುಲ್ಲಾ, ಮುಸ್ಲಿಂ ಮುಖಂಡರಾದ ಶಕೀಲ್ ಅಹಮ್ಮದ್, ದಸ್ತಗೀರ್, ಆಬೀಬುಲ್ಲಾ, ಸರ್ವರ್ ಖಾನ್, ಅಶ್ವಾಕ್, ಫೈರೋಜ್, ಸಾಧಿಕ್, ಗೌಸ್ಖಾನ್ ಇದ್ದರು.