ಶ್ರೀನಗರ (ಪಿಟಿಐ): ಕಣಿವೆಯಲ್ಲಿ ತಾಪಮಾನ ದಿನೇದಿನೇ ಶೂನ್ಯಮಟ್ಟದಿಂದ ಕೆಳಕ್ಕೆ ಜಾರುತ್ತಿದ್ದರೂ ಇಲ್ಲಿನ ಪ್ರಸಿದ್ಧ ಸಂತ ಶೇಖ್ ಹಮ್ಜಾ ಮಖ್ದೂಮ್ ಅವರ ಉರುಸ್ಗೆ ನೂರಾರು ಹಿಂದೂ ಮತ್ತು ಮುಸ್ಲಿಂ ಭಕ್ತರು ಧಾವಿಸಿ ಬರುತ್ತಿದ್ದಾರೆ.
ಹಳೆಯ ಶ್ರೀನಗರದ ಮಧ್ಯಭಾಗದಲ್ಲಿನ ಗಿರಿಶಿಖರದಲ್ಲಿ ರಾರಾಜಿಸುತ್ತಿರುವ ಈ ಸೂಫಿ ಸಂತರ ಸಮಾಧಿ ಸ್ಥಳವಾದ ಕೊಹೆ ಮರನ್ನಲ್ಲಿ ಜನವರಿ 26ರಿಂದ ಉರುಸ್ ಆರಂಭವಾಗಲಿದೆ.
ಈ ಸಮಾಧಿ ಸ್ಥಳಕ್ಕೆ ಹೊಂದಿಕೊಂಡಂತೆ ಒಂದು ಮಸೀದಿಯೂ ಇದೆ. ಇಲ್ಲಿ ಭಕ್ತರ ಎಲ್ಲ ರೀತಿಯ ಬೇಡಿಕೆಗಳು ಈಡೇರುತ್ತವೆ ಎಂಬ ದೃಢ ನಂಬಿಕೆ ಚಾಲ್ತಿಯಲ್ಲಿದೆ. ಈ ಮಸೀದಿಯ ಪಕ್ಕದಲ್ಲೇ ಶಾರಿಕಾ ದೇವಿಯ ದೇವಸ್ಥಾನವೂ ಇರುವುದು ಇಲ್ಲಿನ ವಿಶೇಷ. ಈ ಸಮಾಧಿ ಸ್ಥಳ ಎರಡೂ ಕೋಮಿನವರಿಗೂ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದೆ.
ಶೇಖ್ ಹಮ್ಜಾ ಮಖ್ದೂಮ್ ಈಗಿನ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 1494ರಲ್ಲಿ ಜನಿಸಿದ್ದರು. ರಜಪೂತ ವಂಶಕ್ಕೆ ಸೇರಿದವರಾಗಿದ್ದ ಇವರ ಕುಟುಂಬ ಅತ್ಯಂತ ಶ್ರೀಮಂತಿಕೆಯ ಹಿನ್ನೆಲೆ ಹೊಂದಿತ್ತು. ಆದರೆ ಮುಂದೊಂದು ದಿನ ಶೇಖ್ ಹಮ್ಜಾ ಮಖ್ದೂಮ್ ಅವರು ತಮ್ಮೆಲ್ಲ ಪೂರ್ವಜರ ಆಸ್ತಿಯನ್ನು ತೊರೆದು ಬಂದರು. ಸೂಫಿ ಸಂತರಾಗಿ ಜೀವನ ಸಾಗಿಸುವ ಮೂಲಕ ಕಣಿವೆಯ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ.