ಕನಕಗಿರಿ: ಸಮೀಪದ ನವಲಿ ಗ್ರಾಮದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ ಎಂದು ಪಾಲಕರು ದೂರಿದ್ದಾರೆ.
ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದು ಇಬ್ಬರು ಶಿಕ್ಷಕರು, ಎರಡು ಶಾಲಾ ಕೊಠಡಿಗಳ ಕೊರತೆ ಇದೆ ಎಂದು ಅವರು ತಿಳಿಸುತ್ತಾರೆ.
ಶೌಚಾಲಯ, ಕುಡಿಯುವ ನೀರು, ಮೈದಾನ, ಹೊರಗೋಡೆ ಇತರೆ ಸಮಸ್ಯೆಗಳಿಂದ ಶಾಲೆ ಬಳಲುತ್ತಿದೆ, ಮಳೆಗಾಲದಲ್ಲಿ ಶಾಲೆಯ ಮೈದಾನ ನೋಡಬಾರದು.
ಮೈದಾನ `ಕೆಸರು ಗದ್ದೆ~ಯಾಗಿ ಬದಲಾಗುತ್ತಿದ್ದು ವಿದ್ಯಾರ್ಥಿಗಳು ಕೆಸರಿನಲ್ಲಿಯೆ ನಡೆದುಕೊಂಡು ಬಂದು ತರಗತಿಗೆ ಹಾಜರಾಗಬೇಕಾಗಿದೆ ಎಂದು ಪಾಲಕರು ದೂರುತ್ತಾರೆ.
ಶಾಲೆಗೆ ವಿಶಾಲವಾದ ಜಾಗೆ ಇದ್ದರೂ ಮೈದಾನ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ.
ಹೊರಗೋಡೆ ಇಲ್ಲದ ಕಾರಣ ಊರಿನ ಎಲ್ಲಾ ಚರಂಡಿಗಳ ಗಲೀಜು ನೀರು, ಮಳೆ ನೀರು ಶಾಲೆಯ ಮೈದಾನದಲ್ಲಿ ಸೇರುತ್ತಿದೆ, ಒಂದು ತಿಂಗಳು ಕಾಲ ನೀರು ಮೈದಾನದಲ್ಲಿ ಸಂಗ್ರಹವಾಗುವುದರಿಂದ ಸಾಂಕ್ರಮಿಕ ರೋಗಗಳ ಭೀತಿ ಕಾಡುತ್ತಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲೆಗೆ ಹೊರಗೋಡೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದರೂ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಬೆಳೆದ ಭಿನ್ನಾಭಿಪ್ರಾಯದಿಂದ ಕಾಮಗಾರಿ ಆರಂಭಿಸಿಲ್ಲ.
ಈ ಬಗ್ಗೆ ಕ್ಷೇತ್ರದ ಜಿಪಂ ಸದಸ್ಯೆಯೂ ಆಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಒತ್ತಡ ತಂದರೂ ಕಾಮಗಾರಿ ನೆನಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ, ಕೆಸರು ಗದ್ದೆಯಲ್ಲಿ ವಿವಿಧ ಆಟಗಳನ್ನು ಆಡಬೇಕೆಂದು ವಿದ್ಯಾರ್ಥಿಗಳು ದೂರುತ್ತಾರೆ.
ತಾಲ್ಲೂಕಿನಲ್ಲಿ 22 ಉರ್ದು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಗಳಿದ್ದರೂ ಪ್ರೌಢಶಾಲೆ ಮಾತ್ರ ಒಂದು ಇದೆ, ದೂರದ ಗಂಗಾವತಿಗೆ ಹೋಗಿ ಕಲಿಯುವ ಸ್ಥಿತಿ ಇದೆ.
ಕನಕಗಿರಿ, ಕಾರಟಗಿಯಲ್ಲಿ ಉರ್ದು ಪ್ರೌಢಶಾಲೆಯನ್ನು ತೆರೆಯಬೇಕೆಂದು ಶಿಕ್ಷಕರು, ಪಾಲಕರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.