ಕಾರವಾರ: ಉಳವಿ ಜಾತ್ರೆಯ ಅಂಗವಾಗಿ ಹಲವಾರು ದಶಕಗಳಿಂದ ನಡೆಯುತ್ತಿದ್ದ ಗಿಡ-ಮರಗಳ ಅವ್ಯಾಹತ ಲೂಟಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಕೊನೆಗೂ ಸಫಲವಾಗಿದೆ.
ಬೆಳಗಾವಿ, ಕಿತ್ತೂರ, ಬೈಲಹೊಂಗಲ, ಅಥಣಿ, ಹುಬ್ಬಳ್ಳಿ-ಧಾರವಾಡ ಹಾಗೂ ಇತರೆ ಬಯಲುಸೀಮೆಯ ರೈತರು ಈ ಜಾತ್ರೆಗೆ ಬರುವಾಗ ಗಿಡಮರಗಳನ್ನು ಕಡಿಯಲೆಂದೇ ವಿಶೇಷವಾದ ಕೊಡಲಿ, ಕತ್ತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದರು. ಜಾತ್ರೆ ಮುಗಿಸಿಕೊಂಡು ಹೋಗುವಾಗ ಚಕ್ಕಡಿಯ ಕೆಳಗಡೆ ಗಿಡಮರಗಳ ಎಳೆಗಳನ್ನು, ಬೆತ್ತ ಬಿದಿರುಗಳನ್ನು ಹಾಕಿ ಅದರ ಮೇಲೆ ಹಾಸಿಗೆ ಹಾಕಿ ಕೆಲವೊಮ್ಮೆ ಹುಲ್ಲಿನಡಿ ಹಾಸಿ ಒಯ್ಯುತ್ತಿದ್ದರು. 1995ರಲ್ಲಿ ಆಗಿನ ಹಳಿಯಾಳ ಉಪ ಸಂರಕ್ಷಣಾಧಿಕಾರಿಯಾಗಿದ್ದ ದಿ. ಎಂ.ಎನ್.ನಾರಾಯಣಸ್ವಾಮಿ ಹಾಗೂ ನಂತರದ ಅಧಿಕಾರಿಗಳಾದ ಪಿ.ದಿಕ್ಷಿತ ಅವರು ಇದರ ತಡೆಗೆ ಹಾಗೂ ಜಾಗೃತಿಗೆ ವಿಶೇಷ ತಂಡಗಳನ್ನು ರಚಿಸಿ ಐದಾರು ಅರಣ್ಯ ಚೆಕ್ಪೋಸ್ಟ್ಗಳನ್ನು ರಚಿಸಿದರು.
ಉವಿ ಗ್ರಾಮ ಅರಣ್ಯ ಸಮಿತಿ ಆರಂಭದಲ್ಲಿ ಚುರುಕಾಗಿತ್ತು. ಆದರೆ ಈಗ ಅರಣ್ಯ ಸಿಬ್ಬಂದಿಗಳೇ ಚುರುಕಾಗಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ರೈತರು ಚಕ್ಕಡಿ ಹೂಡಿ ಬರುವವರ ಸಂಖ್ಯೆ ಈಗ ಗಣನೀಯವಾಗಿ ಇಳಿಮುಖವಾಗಿದೆ. ಉಳವಿಗೆ ಬರುವ ಚಕ್ಕಡಿಗಾಡಿಗಳ ಸಂಖ್ಯೆ 2000ದಿಂದ 300ಕ್ಕೆ ಇಳಿದಿದೆ.